ತುಮಕೂರು: ಸುಖಾಸುಮ್ಮನೇ ಕಾಲ ಕಳೆಯುವ, ಅನಗತ್ಯ ಗೈರು ಹಾಜರಾಗುವ, ಹಾಜರಿಗೆ ಸಹಿ ಹಾಕಿ ಊರೂರು ಸುತ್ತಲು ಹೋಗುವ ಶಿಕ್ಷಕರ ಮೇಲೆ ನಿಗಾ ಇಡಲು `ಮಿಂಚಿನ ಸಂಚಾರ~ ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಗೋವಿಂದರಾಜು ಸೂಚಿಸಿದರು.
ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಆನಂದ ರವಿ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಕುಲಗೆಟ್ಟು ಹೋಗಿದೆ. ಶಿಕ್ಷಕರು ಪಾಠ ಮಾಡದೇ ಸಹಿ ಹಾಕಿ ಊರೂರು ತಿರುಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇಲಾಖೆಯ ಉಪ ನಿರ್ದೇಶಕರು ಶಾಲೆಗಳಿಗೆ ದಿಢೀರ್ ಭೇಟಿ ನೀಡುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕರನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ. ಶಾಲೆಗಳಲ್ಲಿ ಸರಿಯಾಗಿ ಪಾಠವನ್ನೇ ಮಾಡುತ್ತಿಲ್ಲ. ಹೊಸದಾಗಿ ನಿರ್ಮಾಣ ಆಗುತ್ತಿರುವ ಶಾಲಾ ಕಟ್ಟಡಗಳಿಗೆ ನೀರು ಹಾಕಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಧ್ಯಕ್ಷರು ಕಿಡಿಕಾರಿದರು.
ಆದರೆ ಅಧ್ಯಕ್ಷರ ಆರೋಪ ಒಪ್ಪದ ಉಪ ನಿರ್ದೇಶಕ ಮೋಹನ್ಕುಮಾರ್, ಇಡೀ ಜಿಲ್ಲೆಯಲ್ಲಿ ಅಂಥ ಘಟನೆಗಳು ನಡೆಯುತ್ತಿಲ್ಲ. ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಸಂಕ್ಷಿಪ್ತ ಮೌಲ್ಯಮಾಪನ ಆರಂಭವಾಗಿದೆ. ಪ್ರತಿ ಶಾಲೆಯ ಚಟುವಟಿಕೆ, ಶಿಕ್ಷಕರ ಪಾಠದ ವಿವರವನ್ನು ತರಿಸಿಕೊಳ್ಳಲಾಗುತ್ತಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಇರುವ ಶಾಲೆಗಳ ಪಟ್ಟಿ ಕೊಡಿ ಎಂದು ಆನಂದ ರವಿ ಪಟ್ಟು ಹಿಡಿದರು. ಜಿಲ್ಲೆಯಲ್ಲಿ ಯಾವ ಶಾಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ಗೂ ಪ್ರಮಾಣ ಪತ್ರ ಸಲ್ಲಿಸಿಯಾಗಿದೆ ಎಂದು ಮೋಹನ್ಕುಮಾರ್ ಹೇಳಿದರು.
ಆದರೆ ಈ ಮಾತುಗಳನ್ನು ಅಧ್ಯಕ್ಷರು ಒಪ್ಪಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಇರುವ ಶಾಲೆಗಳ ಪಟ್ಟಿಕೊಡಿ ಎಂದು ಪಟ್ಟು ಹಿಡಿದರು. ಆದರೆ ಅಧ್ಯಕ್ಷರು ಪಟ್ಟು ಹಿಡಿದರೂ ನೀರಿನ ಸಮಸ್ಯೆ ಇದೆ ಎಂಬುದನ್ನು ಉಪನಿರ್ದೇಶಕರು ಒಪ್ಪಲಿಲ್ಲ.
ಈ ವಾಗ್ವಾದದ ನಡುವೆ ಅಧ್ಯಕ್ಷರನ್ನು ಸಿಇಒ ಗೋವಿಂದರಾಜು ಸಮಧಾನ ಪಡಿಸಿದರು. ಶಿಕ್ಷಕರ ಮೇಲೆ ಕಣ್ಗಾವಲು ಇಡಲು `ಮಿಂಚಿನ ಸಂಚಾರ~ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ತಿಪಟೂರು ತಾಲ್ಲೂಕು ಕೈದಾಳ ಶಾಲೆಯಲ್ಲಿ ನೂತನ ಶಾಲಾ ಕಟ್ಟಡ ಕಾಮಗಾರಿಗೆ ನೀರು ಹಾಕಲು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಧ್ಯಕ್ಷರು ದೂರಿದರು. ಈ ಶಾಲೆಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ಉಪ ನಿರ್ದೇಶಕರು ತಿಳಿಸಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 1316 ಶಾಲೆಗಳು ಬರುತ್ತವೆ. ಯಾವುದೇ ಶಾಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ಕೆಲವು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಪುನಃಶ್ಚೇತನ ಕೈಗೊಳ್ಳಬೇಕಾಗಿದೆ ಎಂದು ಉಪ ನಿರ್ದೇಶಕ ಆಂಜಿನಪ್ಪ ಹೇಳಿದರು.ಸಭೆಯಲ್ಲಿ ಉಪಾಧ್ಯಕ್ಷೆ ನಾಗಾಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚಮಾರಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.