ADVERTISEMENT

ಕೆಪಿಎಸ್‌ಸಿಗೆ ಅರ್ಜಿ: ಕೈಕೊಟ್ಟ ಸರ್ವರ್

ಪ್ರಜಾವಾಣಿ ವಿಶೇಷ
Published 8 ಮಾರ್ಚ್ 2011, 8:55 IST
Last Updated 8 ಮಾರ್ಚ್ 2011, 8:55 IST

ತುಮಕೂರು: ಕಂಪ್ಯೂಟರ್ ಬಂದ ಮೇಲೆ ಚಿಟಿಕೆ ಹೊಡೆಯುವುದರೊಳಗೆ ಆಗುತ್ತಿದ್ದ ಕೆಲಸಗಳು ಈಗ ಗಂಟೆಗಟ್ಟಲೆ ಕಾದರೂ ಆಗುತ್ತಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ಮತ್ತು ಇಂಟರ್‌ನೆಟ್ ಬಳಕೆದಾರರಿಗೆ ‘ಸರ್ವರ್ ಡೌನ್’ ಸಮಸ್ಯೆ ತಲೆನೋವು ತಂದಿದೆ.ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಬಾಕಿ ಉಳಿದಿರುವುದರಿಂದ ಅರ್ಜಿ ಸಲ್ಲಿಸಲು ಕಾದಿರುವ ಆಕಾಂಕ್ಷಿಗಳು ಪರದಾಡುತ್ತಿದ್ದಾರೆ.

ಕೆಪಿಎಸ್‌ಸಿ ಮೂಲಕ ನೇಮಕಾತಿ ಮಾಡಿಕೊಳ್ಳಲು 800 ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಕಳೆದ 15 ದಿನಗಳಿಂದಲೂ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಕೆಪಿಎಸ್‌ಸಿ ನಿಗದಿಪಡಿಸಿದ್ದ ಗಡುವಿನೊಳಗೆ ಅರ್ಜಿ ಸಲ್ಲಿಸಲು ಆಗದಿರುವ ಬಗ್ಗೆ ಆಕಾಂಕ್ಷಿಗಳು ಸಮಸ್ಯೆ ತೋಡಿಕೊಂಡಿರುವುದು ಸದನದಲ್ಲೂ ಚರ್ಚೆ ಆಗಿ, ಸರ್ಕಾರ ಕಾಲಾವಕಾಶ ವಿಸ್ತರಿಸಿತ್ತು. ಆಕಾಂಕ್ಷಿಗಳು ಅಗತ್ಯ ದಾಖಲಾತಿಗಳನ್ನು ಪಡೆದು ಮತ್ತು ಉದ್ಯೋಗದಲ್ಲಿದ್ದವರು ನಿರಾಪೇಕ್ಷಣಾ ಪತ್ರ ಪಡೆದು ಅರ್ಜಿ ಸಲ್ಲಿಸಲು ಶುರು ಮಾಡುವಷ್ಟರಲ್ಲಿ ಈಗ ‘ಸರ್ವರ್ ಡೌನ್’ ಸಮಸ್ಯೆ ಸತಾಯಿಸುತ್ತಿದೆ.

’ಒಂದೊಂದು ಅರ್ಜಿ ಸಲ್ಲಿಸಲು ಕೇವಲ 2ರಿಂದ 3 ನಿಮಿಷ ಬೇಕಾಗುವ ಸಮಯ ಈಗ ಸರ್ವರ್ ಡೌನ್ ಸಮಸ್ಯೆಯಿಂದಾಗಿ ಕನಿಷ್ಠ ಒಂದೆರಡು ತಾಸು ತೆಗೆದುಕೊಳ್ಳುತ್ತಿದೆ. ಉದ್ಯೋಗ ಆಕಾಂಕ್ಷಿಗಳು ಇಂಟರ್‌ನೆಟ್ ಬ್ರೌಸಿಂಗ್ ಸೆಂಟರ್‌ಗಳ ಮುಂದೆ ನಾಯಿಪಾಡು ಅನುಭವಿಸುತ್ತಿದ್ದಾರೆ. ಅವರ ಗೋಳು ನೋಡಲಾಗದೆ ಕಳೆದ ಮೂರ್ನಾಲ್ಕು ದಿನಗಳಿಂದ ಹಗಲು-ರಾತ್ರಿ ನಿದ್ದೆಗೆಟ್ಟು ಕುಳಿತು ಅರ್ಜಿ ತುಂಬುತ್ತಿದ್ದೇನೆ’ ಎನ್ನುತ್ತಾರೆ ಬಾರ್‌ಲೈನ್ ರಸ್ತೆಯಲ್ಲಿರುವ ಸೈಬರ್ ಕೆಫೆ ಮಾಲೀಕರೊಬ್ಬರು.

‘ಕೆಪಿಎಸ್‌ಸಿಯ ವೆಬ್‌ಸೈಟ್ ತುಂಬಾ ಹಳೆಯದಾಗಿದೆ. ಸರ್ವರ್ ಸಾಮರ್ಥ್ಯ ಹೆಚ್ಚಿಸಿ, ಪರಿಷ್ಕರಣೆ ಮಾಡಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿರುವಾಗ ಓಬಿರಾಯನ ಕಾಲದ ಸಾಫ್ಟ್‌ವೇರ್ ಮತ್ತು ಸರ್ವರ್ ಇಟ್ಟುಕೊಂಡು ಕುಳಿತರೆ ಸಾಧ್ಯವಾಗುವುದಿಲ್ಲ. ಸರ್ವರ್ ಸಾಮರ್ಥ್ಯ ಹೆಚ್ಚಿಸಿಕೊಂಡರೆ ಒಂದೇ ದಿನದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆ ವಿಳಂಬ ತಪ್ಪಿಸಬಹುದು’ ಎನ್ನುವುದು ಅವರ ಅನಿಸಿಕೆ.

‘ಸರ್ಕಾರ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದಾಗಲೆಲ್ಲ ಈ ಸಮಸ್ಯೆ ಕಾಯಂ. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದಾಗಲೂ ಇದೇ ಸಮಸ್ಯೆ ತಲೆದೋರಿತ್ತು. ಈಗಲೂ ಅದೇ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ಇಷ್ಟೊಂದು ಅರ್ಜಿಗಳು ಬರುತ್ತಿರುವುದನ್ನು ಗಮನಿಸಿಯೇ ಸಂಬಂಧಿಸಿದ ಇಲಾಖೆಯೇ ಸರ್ವರ್‌ಡೌನ್ ಮಾಡಿರುವ ಸಾಧ್ಯತೆ ಇದೆ. ಜತೆಗೆ ಕೊನೆ ದಿನಾಂಕ ಸಮೀಪಿಸಿರುವುದರಿಂದ ಆಕಾಂಕ್ಷಿಗಳೆಲ್ಲರೂ ಏಕ ಕಾಲದಲ್ಲಿ ಅರ್ಜಿ ಸಲ್ಲಿಸಲು ಮುಗಿಬಿದ್ದಿರುವುದರಿಂದಲೂ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವುದರಲ್ಲಿ ವಿಳಂಬವಾಗುತ್ತಿದೆ’ ಎನ್ನುತ್ತಾರೆ ಈ ಬಾರಿಯ ಎಫ್‌ಡಿಎ ಪರೀಕ್ಷೆಗೆ ಕುಳಿತುಕೊಳ್ಳಲಿರುವ ಲೋಹಿತ್.

ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ‘ಆನ್‌ಲೈನ್ ಸಿಸ್ಟಮ್’ ಆರಂಭದಲ್ಲಿ ವರದಾನವೆಂದೇ ಭಾವಿಸಲಾಗಿತ್ತು. ಕಾಗದ, ಅಂಚೆ ಶುಲ್ಕಕ್ಕೆ ವೆಚ್ಚ ಮಾಡುತ್ತಿದ್ದ ಹಣವೂ ಉಳಿತಾಯವಾಗುತ್ತಿತ್ತು. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಹಳೆ ವ್ಯವಸ್ಥೆಯೇ ಎಷ್ಟೋ ಮಿಗಿಲು ಎನ್ನುವ ಗೊಣಗಾಟ ಅರ್ಜಿದಾರರಿಂದ ಕೇಳಿಬರುತ್ತಿದೆ.

ಈಗ ಉದ್ಭವಿಸಿರುವ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು; ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಿಸಬೇಕು ಎಂದು ಸೋಮವಾರ ಅನೇಕ ಆಕಾಂಕ್ಷಿಗಳು ‘ಪ್ರಜಾವಾಣಿ’ ಕಚೇರಿಗೆ ದೂರವಾಣಿ ಕರೆ ಮಾಡಿ, ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.