ADVERTISEMENT

ಖಾಸಗಿ ಸುದ್ದಿ ವಾಹಿನಿ ವಿರುದ್ಧ ಮಾನನಷ್ಟ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 11:21 IST
Last Updated 7 ಏಪ್ರಿಲ್ 2018, 11:21 IST

ಚಿಕ್ಕನಾಯಕನಹಳ್ಳಿ: ’ನನ್ನ ಪರವಾಗಿ ಸುದ್ದಿ ಮಾಡಲು ಖಾಸಗಿ ಟಿವಿ ವಾಹಿನಿ ಬಿ.ಟಿವಿ ವರದಿ ಕೇಳಿತ್ತು. ಹಣ ನೀಡಲು ನಿರಾಕರಿಸಿದ್ದಕ್ಕೆ ನನ್ನ ವಿರುದ್ಧ ವರದಿ ಪ್ರಸಾರ ಮಾಡಿ ತೇಜೋವಧೆ ಮಾಡಿದೆ. ಈ ಸುದ್ದಿ ವಾಹಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಶಾಸಕ ಸಿ.ಬಿ.ಸುರೇಶ್‌ ಬಾಬು ಹೇಳಿದರು.

ಪಟ್ಟಣದ ಜೆಡಿಎಸ್ ಮುಖಂಡ ಬಿ.ಎನ್.ಶಿವಪ್ರಕಾಶ್ ಮನೆಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಟಿವಿ ಸುದ್ದಿ ವಾಹಿನಿಯ ಜಿಲ್ಲಾ ಪ್ರತಿನಿಧಿ ನನ್ನ ಪರವಾಗಿ ವರದಿ ಮಾಡುತ್ತೇವೆ ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದಕ್ಕೆ, ಸ್ಥಳೀಯ ವಸ್ತುಸ್ಥಿತಿ ಅರಿಯದೆ, ನನ್ನ ವಿರುದ್ಧ ಹುರುಳಿಲ್ಲದ ವರದಿ ಮಾಡಿದ್ದಾರೆ' ಎಂದು ಆರೋಪಿಸಿದರು.’ ನನ್ನ ಬಳಿ ಸಂಭಾಷಣೆಯ ರೆಕಾರ್ಡ್‌ ಇದೆ. ಹಣ ನೀಡಲು ಒಪ್ಪಲಿಲ್ಲ ಎಂದು ನನಗೆ ಮಸಿ ಬಳಿಯಲು ಹೊರಟಿದ್ದಾರೆ’ ಎಂದರು.

’ವರದಿಗಾರ ನನ್ನ ಬಳಿ ಮಾತನಾಡಿರುವ ಆಡಿಯೊ ತುಣಕಿನಲ್ಲಿ ಕೊರಟಗೆರೆ, ಗುಬ್ಬಿ ತಿಪಟೂರು ವಿಧಾನಸಭಾ ಕ್ಷೇತ್ರದ ವಿಧಾನಸಭಾ ಅಭ್ಯರ್ಥಿಗಳು ಹಣ ನೀಡುತ್ತಿದ್ದಾರೆ. ಅದೇ ರೀತಿ ನೀವು ನೀಡುವಂತೆ ಕೇಳಿರುವ ಬಗ್ಗೆ ಒಟ್ಟು 14.5 ನಿಮಿಷ ಸಂಭಾಷಣೆ  ನನ್ನ ಮೊಬೈಲ್‌ನಲ್ಲಿ ರೆಕಾರ್ಡ್  ಆಗಿದೆ’  ಎಂದು ಹೇಳಿದರು.

ADVERTISEMENT

ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆ: ಏಪ್ರಿಲ್ 20ರಂದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಾಗುವುದು. ಅದೇ ದಿನ ತಾಲ್ಲೂಕಿನಲ್ಲಿ ಕುಮಾರಪರ್ವ ಕಾರ್ಯಕ್ರಮ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್.ಶಿವಪ್ರಕಾಶ್, ಪುರಸಭೆ ಅಧ್ಯಕ್ಷ ಮಹಮದ್‌ ಖಲಂದರ್, ಪುರಸಭಾ ಸದಸ್ಯರಾದ ಎಂ.ಕೆ.ರವಿಚಂದ್ರ, ರೇಣುಕಮ್ಮ, ಸಿ.ಎಸ್.ರಮೇಶ್, ದೊರೆಮುದ್ದಯ್ಯ, ಸಿ.ಎಸ್.ನಟರಾಜು, ಮಲ್ಲೇಶಯ್ಯ ಉಪಸ್ಥಿತರಿದ್ದರು.

ಕನಿಕರ ಏಕಿಲ್ಲ?

ಸಚಿವರಾದ ಟಿ.ಬಿ.ಜಯಚಂದ್ರರವರ ಮಗ ಸಂತೋಷ್‌ ಜಯಚಂದ್ರ ಚುನಾವಣೆ ಹತ್ತಿರವಾದ ಸಮಯದಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಓಡಾಡುತ್ತಿದ್ದಾರೆ. ಆದರೆ ಪಕ್ಷ ಸಂಘಟನೆ ಮಾಡಿಕೊಂಡು ಬಂದ ಸಾಸಲು ಸತೀಶ್ ಅವರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಮಾಧುಸ್ವಾಮಿ ಹೇಳುತ್ತಿದ್ದಾರೆ. ಸಾಸಲು ಸತೀಶ್ ಬಗ್ಗೆ ಕನಿಕರ ತೋರುವ ಮಾಧುಸ್ವಾಮಿ ಕೆ.ಎಸ್.ಕಿರಣ್‌ ಕುಮಾರ್ ಅವರನ್ನು ಮೂಲೆಗುಂಪು ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.