ADVERTISEMENT

ಜಮೀನು ವಿವಾದ; ಸಿದ್ದಪ್ಪ ಕುಟುಂಬಕ್ಕೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 7:25 IST
Last Updated 3 ಮಾರ್ಚ್ 2012, 7:25 IST
ಜಮೀನು ವಿವಾದ; ಸಿದ್ದಪ್ಪ ಕುಟುಂಬಕ್ಕೆ ಬಹಿಷ್ಕಾರ
ಜಮೀನು ವಿವಾದ; ಸಿದ್ದಪ್ಪ ಕುಟುಂಬಕ್ಕೆ ಬಹಿಷ್ಕಾರ   

ತುರುವೇಕೆರೆ: ಜಮೀನು ವಿವಾದ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಕುಟುಂಬವೊಂದಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಸಮೀಪದ ಕೊಟ್ಟೂರನ ಕೊಟ್ಟಿಗೆಯಲ್ಲಿ ನಡೆದಿದೆ.ಆರು ತಿಂಗಳ ಹಿಂದೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮದ ಸಿದ್ದಪ್ಪ, ದಾಸಪ್ಪ ಎಂಬುವರ ಮಧ್ಯೆ ಹೊಡೆದಾಟ ನಡೆದು ಸಿದ್ದಪ್ಪ ಗ್ರಾಮದ 18 ಮಂದಿ ಮೇಲೆ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು.

ಈ ಘಟನೆ ನಂತರ ಸಿದ್ದಪ್ಪ ಕುಟುಂಬಕ್ಕೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿದ್ದಾರೆ ಎಂದು ಹೇಳಲಾಗಿದ್ದು, ಸಿದ್ದಪ್ಪ ದಂಪತಿ ಇಳಿವಯಸ್ಸಿನಲ್ಲಿ ತೋಟದ ಮನೆಯಲ್ಲಿ ಗಡಿ ಪಾರಾದ ಕೈದಿಗಳಂತೆ ಬದುಕುತ್ತಿದ್ದಾರೆ.

ಸಿದ್ದಪ್ಪನವರ ತೋಟಕ್ಕೆ ಶುಕ್ರವಾರ ಭೇಟಿ ನೀಡಿದ `ಪ್ರಜಾವಾಣಿ~ ಜೊತೆ ಮಾತನಾಡಿದ ಸಿದ್ದಪ್ಪ, ನಾವು ಯಾರನ್ನೂ ಮಾತನಾಡಿಸುವಂತಿಲ್ಲ. ಪ್ರಾಣಭಯದಿಂದ ಗ್ರಾಮದೊಳಗೆ ಹೋಗುವಂತಿಲ್ಲ, ದೇವಸ್ಥಾನಕ್ಕೂ ನಮಗೆ ಪ್ರವೇಶವಿಲ್ಲ.

ಎಲೆಅಡಿಕೆ ಕೊಟ್ಟ ಕಾರಣಕ್ಕೆ ಅಜ್ಜಿಯೊಬ್ಬರಿಗೆ ಗ್ರಾಮಸ್ಥರು ಕಿರುಕುಳ ನೀಡಿದ್ದಾರೆ. ನಾವು ಯಾರ ಜೊತೆ ಮಾತಾಡಿದರೂ ಅವರಿಗೆ ದಂಡ ಹಾಕಲಾಗುತ್ತದೆ.  ಗಲಾಟೆ ನಂತರ ಮನೆಯಲ್ಲಿದ್ದ ಸಾಮಾನು ದೋಚಲಾಗಿದೆ.

ತೋಟದ ಕೊಳವೆ ಬಾವಿಗಿದ್ದ ವಿದ್ಯುತ್ ಸಂಪರ್ಕ ಕಡಿದು ಹಾಕಲಾಗಿದೆ. ಗ್ರಾಮದಲ್ಲಿ ಯಾರೂ ಒಂದು ಬಿಂದಿಗೆ ನೀರು ಕೊಡುತ್ತಿಲ್ಲ. ಹೀಗಾಗಿ ಕುಡಿಯುವ ನೀರಿಗೂ ಪರಿತಪಿಸುವಂತಾಗಿದ್ದು, ಸುಮಾರು 3 ಕಿ.ಮೀ ದೂರದಿಂದ ಬಿಂದಿಗೆಯಲ್ಲಿ ನೀರು ಹೊತ್ತು ತರುವಂತಾಗಿದೆ.
 
ಬೆಳೆದು ನಿಂತ ತೆಂಗು-ಬಾಳೆ ಬಾಡಿ ಬಸವಳಿದಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಕೊಳವೆ ಬಾವಿ ಹಾಗೂ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಕಂಡ ಕಂಡ ಅಧಿಕಾರಿಗಳಿಗೆ ಅಂಗಲಾಚಿದ್ದೇನೆ. ಪೊಲೀಸರಿಗೆ ದೂರು ನೀಡಿದ್ದೇನೆ.

ಮುಖ್ಯಮಂತ್ರಿ ಸದಾನಂದಗೌಡ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಈ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರೂ; ನಮ್ಮ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ನೀಡಲು ಗ್ರಾಮಸ್ಥರು ಅಡ್ಡಿ ಮಾಡುತ್ತಿದ್ದಾರೆ. ನಮಗೆ ನೇಣು ಹಾಕಿಕೊಂಡು ಸಾಯುವುದಷ್ಟೇ ಉಳಿದಿರುವ ದಾರಿ ಎಂದು ಸಿದ್ದಪ್ಪ ದಂಪತಿ ಕಣ್ಣೀರಿಟ್ಟರು.

ಬಹಿಷ್ಕಾರ ಹಾಕಿಲ್ಲ: ಆದರೆ ಕೊಟ್ಟೂರನಕೊಟ್ಟಿಗೆ ಗ್ರಾಮದ ಮುಖಂಡರು ಹೇಳುವುದೇ ಬೇರೆ! ಸಿದ್ದಪ್ಪ ಗ್ರಾಮದ ಕಟ್ಟುಪಾಡು ಮುರಿದಿದ್ದಾರೆ. ತಾವೇ ದೌರ್ಜನ್ಯ ನಡೆಸಿ ವಿನಾಃ ಕಾರಣ ಅಮಾಯಕರ ಮೇಲೆ ದೂರು ದಾಖಲಿಸಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ.

ಆದರೂ ಅವರಿಗೆ ನಾವು ಬಹಿಷ್ಕಾರವೇನೂ ಹಾಕಿಲ್ಲ. ಅವರ ಸಹವಾಸವೇ ಬೇಡವೆಂದು ನಾವೇ ದೂರವಿದ್ದೇವೆ. ಸಿದ್ದಪ್ಪ ತಮ್ಮ ತೋಟದಿಂದ ಬೇರೆಯವರಿಗೆ ವಿದ್ಯುತ್ ಕಂಬ ಹಾಕಲು ತೊಂದರೆ ಮಾಡಿದ್ದರಿಂದ ಅವರಿಗೂ ವಿದ್ಯುತ್ ಸಂಪರ್ಕ ಸಿಗಬಾರದು ಎಂಬುದು ನಮ್ಮ ತೀರ್ಮಾನ.

ಅವರು ಗ್ರಾಮದ ಪಂಚಾಯಿತಿ ಕಟ್ಟೆಯಲ್ಲಿ ವಿಷಯ ಬಗೆಹರಿಸಿಕೊಳ್ಳುವವರೆಗೂ ವಿದ್ಯುತ್ ಸಂಪರ್ಕ ಕೊಡಲು ಬಿಡುವುದಿಲ್ಲ. ಪಂಚಾಯ್ತಿ ತೀರ್ಮಾನವೇ ಅಂತಿಮ ಎಂದು ಗ್ರಾಮದ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.