ADVERTISEMENT

ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 6:20 IST
Last Updated 1 ಫೆಬ್ರುವರಿ 2011, 6:20 IST

ಕುಣಿಗಲ್: ದೇಶದ ಸ್ವಾತಂತ್ರ್ಯ ಉಳಿಸಿಕೊಳ್ಳಲೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸಲಹೆ ನೀಡಿದರು.

ಭಾನುವಾರ ಸಂಜೆ ತಾಲ್ಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಕ್ಷೇತ್ರದ ಭಕ್ತಾದಿಗಳು ಸಮರ್ಪಿಸಿದ ‘ಗುರುವಂದನೆ’ ಸ್ವೀಕರಿಸಿ ಮಾತನಾಡಿ, ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ನ್ಯಾಯವಾದ ಸಂದೇಶ ನೀಡಬೇಕಿದೆ. ಧರ್ಮಕ್ಕೆ ಬೆಲೆ ಕೊಡದ ಹೊರತು ದೇಶದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದರು.

ಶಾಸಕ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿ, ಎಡೆಯೂರು ಕ್ಷೇತ್ರ 45 ಕೋಟಿ ರೂಪಾಯಿ ವೆಚ್ಚದಲ್ಲಿ ಎಡೆಯೂರು ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆ, ಬೈಪಾಸ್ ರಸ್ತೆ ನಿರ್ಮಾಣ, ದೇವಾಲಯದ ಪುನರ್ ನಿರ್ಮಾಣ ಕಾರ್ಯಗಳು ನಿಗದಿತ ಅವಧಿಯೊಳಗೆ ಮುಗಿಸಿ ಭಕ್ತರಿಗೆ ಸಮರ್ಪಿಸಬೇಕು ಎಂದು ತಿಳಿಸಿದರು.

ಬಾಳೆಹೊನ್ನೂರು ಖಾಸಾ-ಶಾಖಾ ಮಠದ ರೇಣುಕಾಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ಸುಭಾಸ್ ಬಿ.ಆದಿ,ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಮೃತ್ಯುಂಜಯಸ್ವಾಮಿ, ಎಂಜಿನಿಯರ್ ಸುರೇಶ್, ಮಾಜಿ ಶಾಸಕ ಗಂಗಾಧರಪ್ಪ, ಪ್ರಭಾರ ತಹಸೀಲ್ದಾರ್ ಶಾಂತಾ ಎಸ್.ಹುಲಮನಿ, ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ವೈ.ಎನ್.ಸಿದ್ದಲಿಂಗಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣ್ಣಗೌಡ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಾನಪದ ಕಲಾರತ್ನ ಆಲೂರು ನಾಗಪ್ಪ ಮತ್ತು ತಂಡದವರಿಂದ ರಸಸಂಜೆ ಕಾರ್ಯಕ್ರಮ ಹಾಗೂ ರಾತ್ರಿ 10ಗಂಟೆಗೆ ‘ಬೆಳ್ಳಿ ಪಲ್ಲಕ್ಕಿ’ಉತ್ಸವಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.