ADVERTISEMENT

ಜಾನುವಾರು ಸಾವು: ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 6:15 IST
Last Updated 26 ಫೆಬ್ರುವರಿ 2011, 6:15 IST

ಕುಣಿಗಲ್: ತಾಲ್ಲೂಕಿನ ಹೊಸುರು ಗ್ರಾಮದಲ್ಲಿ ನಿಗೂಢ ರೋಗಕ್ಕೆ ಜಾನುವಾರುಗಳು ಬಲಿಯಾಗುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದರೆ, ಪಶುವೈದ್ಯರು ರೋಗ ಪತ್ತೆ ಹಚ್ಚಿ ಚಿಕಿತ್ಸೆ ಕೊಡಲು ಪರದಾಡುತ್ತಿದ್ದಾರೆ.ಕಸಬಾ ಹೋಬಳಿಯ ಸಂತೇಮಾವತ್ತೂರು ಸಮೀಪದ ಹೊಸೂರು ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಈಚೆಗೆ ಸೀನಪ್ಪ ಎಂಬುವರ 3 ಹೋರಿಗಳು ಸೇರಿದಂತೆ 15ಕ್ಕೂ ಹೆಚ್ಚು ಹಸು, ಎಮ್ಮೆ, ಇತರ ರಾಸುಗಳು ನಿಗೂಢ ಕಾಯಿಲೆಗೆ ತುತ್ತಾಗಿವೆ.

ಆರಂಭದಲ್ಲಿ ಜಾನುವಾರುಗಳಿಗೆ ರೋಗ ಕಂಡುಬಂದಾಗ ಸ್ಥಳೀಯ ಪಶುವೈದ್ಯ ಇಲಾಖೆ ಹಿರಿಯ ಪಶು ಪರೀಕ್ಷಕರಾದ ಕೃಷ್ಣಮೂರ್ತಿ ಬಳಿ ಚಿಕಿತ್ಸೆ ಕೊಡಿಸಿದ್ದರು. ರೋಗ ಗುಣಮುಖವಾಗದಾಗ ಸಂತೇಮಾವತ್ತೂರು ವೈದ್ಯಾಧಿಕಾರಿ ಶ್ರೀನಿವಾಸ್‌ಕುಚ ಚಿಕಿತ್ಸೆ ನೀಡಿದರು.

ಆದರೂ ರೋಗ ನಿಯಂತ್ರಣಕ್ಕೆ ಬಾರಲಿಲ್ಲ. ಪರಿಸ್ಥಿತಿಯ ವಿಷಮತೆ ಅರಿತ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ರಾಜಶೇಖರ್ ಸಂಚಾರಿ ಚಿಕಿತ್ಸಾ ಘಟಕದೊಂದಿಗೆ ತೆರಳಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ಚಿಕಿತ್ಸೆ ಕೊಡುತ್ತಿದ್ದಾರೆ. ಇಷ್ಟಾದರೂ ರೋಗ ನಿಯಂತ್ರಣಕ್ಕೆ ಬಾರದೆ ಗುರುವಾರ ರಾತ್ರಿ ಸೀನಪ್ಪ ಎಂಬುವರಿಗೆ ಸೇರಿದ ಹೋರಿ ಮೃತಪಟ್ಟಿದೆ. ನಂಜುಂಡಪ್ಪನವರಿಗೆ ಸೇರಿದ ಹಸು ನಿತ್ರಾಣಗೊಂಡು ಸಾಯುವ ಸ್ಥಿತಿಯಲ್ಲಿದೆ.

ನಿಗೂಢ ರೋಗ ಗುಣಪಡಿಸುವಲ್ಲಿ ಪಶುವೈದ್ಯಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದು ಹೆಗ್ಗಡತಿಹಳ್ಳಿ, ಮೋದೂರು ಗ್ರಾಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಇಷ್ಟಾದರೂ ತಜ್ಞ ವೈದ್ಯರು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನೃತ್ಯ ಸಿಂಚನ ನಾಳೆ
ಹೆಬ್ಬೂರು:
ವಿಪ್ರ ಹಕ್ಕಿ ಬಳಗದ ವತಿಯಿಂದ ಫೆ. 27ರಂದು ಹೆಬ್ಬೂರಿನ ವಿಪ್ರ ಆಂಗ್ಲ ಶಾಲಾ ಮೈದಾನದಲ್ಲಿ ಸಂಜೆ 6ಕ್ಕೆ ‘ನೃತ್ಯ ಸಿಂಚನ’ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಸುಜಯ್, ರಶ್ಮಿ ಅವರನ್ನು ಸನ್ಮಾನಿಸಲಾಗುವುದು. ಆಂಗ್ಲೊ-ಫ್ರೆಂಚ್ ಡಿಸ್ಟಲರೀಸ್ ನಿರ್ದೇಶಕ ಎ.ಸಾಯಿಪ್ರಕಾಶ್ ಪಾಲ್ಗೊಳ್ಳುವರು ಎಂದು ಬಳಗದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.