ADVERTISEMENT

ಜೀರ್ಣೋದ್ಧಾರದಲ್ಲಿ ನಿರ್ಲಕ್ಷ್ಯ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 10:05 IST
Last Updated 6 ಏಪ್ರಿಲ್ 2013, 10:05 IST
ಜೀರ್ಣೋದ್ಧಾರ ವೇಳೆ ವಿರೂಪಗೊಂಡಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯ ಯೋಗ ಮಾಧವ ದೇಗುಲ.
ಜೀರ್ಣೋದ್ಧಾರ ವೇಳೆ ವಿರೂಪಗೊಂಡಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯ ಯೋಗ ಮಾಧವ ದೇಗುಲ.   

ಚಿಕ್ಕನಾಯಕನಹಳ್ಳಿ: ಇತಿಹಾಸ ಪ್ರಸಿದ್ಧ ಯೋಗ ಮಾಧವ ದೇಗುಲವನ್ನು ಮೂಲ ಸ್ವರೂಪದಲ್ಲಿಯೇ ಜೀರ್ಣೋದ್ಧಾರ ಮಾಡಬೇಕೆಂದು ಗ್ರಾಮಸ್ಥರು ಬುಧವಾರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಶೆಟ್ಟಿಕೆರೆಯಲ್ಲಿರುವ ಯೋಗ ಮಾಧವ ದೇಗುಲವನ್ನು 13ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ. ಹೊಯ್ಸಳ ರಾಜ ಮುಮ್ಮಡಿ ನರಸಿಂಹನು ಸ್ವತಃ ಯೋಗ ಮಾಧವ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಬಗ್ಗೆ ಶಾಸಕನ ಉಲ್ಲೇವಿದೆ.

ಶಿಥಿಲಾವಸ್ಥೆಯಲ್ಲಿದ್ದ ದೇಗುಲದ ಜೀರ್ಣೋದ್ಧಾರಕ್ಕಾಗಿ ಕೇಂದ್ರ ಪ್ರಾಚ್ಯವಸ್ತು ಇಲಾಖೆಯು ರೂ 1.32 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೂ ಜೀರ್ಣೋದ್ಧಾರದ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಕುರಿತು ಶೀಘ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಜೀರ್ಣೋದ್ಧಾರ ಸಮಯದಲ್ಲಿ ಗುತ್ತಿಗೆದಾರರು ಪುರಾತನ ಕುಸುರಿ ಕೆಲಸವಿದ್ದ ಕಲ್ಲುಗಳನ್ನು ಸ್ಥಳದಲ್ಲಿಯೇ ಪಾಲಿಶ್ ಮಾಡಿ ರಾತ್ರೋರಾತ್ರಿ ಅಪಹರಿಸಿದ್ದಾರೆ. ಇಲ್ಲಿಯವರೆಗೆ ಗುತ್ತಿದಾರರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿಲ್ಲ. ಜೀರ್ಣೋದ್ಧಾರ ಕಾರ್ಯಕ್ಕೆ ಬಳಕೆಯಾಗುತ್ತಿರುವ ವಸ್ತುಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಅನನುಭವಿ ಕಾರ್ಮಿಕರು ದೇಗುಲದ ಮೂಲ ಸ್ವರೂಪವನ್ನೇ ಬದಲಿಸಿದ್ದಾರೆ ಎಂದು ಆರೋಪಿಸಿದರು.

ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೃಷ್ಣಸ್ವಾಮಿ ಮಾತನಾಡಿ, ದೇಗುಲವು ಮುಜರಾಯಿ ಇಲಾಖೆಗೆ ಸೇರಿಲ್ಲ. ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ದೇಗುಲ ಕಾಮಗಾರಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಈ ಕುರಿತು ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದರು.

ದೇಗುಲದ ಕನ್ವೀನರ್ ಎಸ್.ಬಿ.ರಾಮಲಿಂಗಾಚಾರ್, ಗ್ರಾಮಸ್ಥರಾದ ಅರುಣ್‌ಕುಮಾರ್, ಎಸ್.ಎಸ್.ಭೈರಪ್ಪ, ಸತೀಶ್, ಸತ್ಯನಾರಾಯಣ್, ಸುಬ್ರಹ್ಮಣ್ಯಶಾಸ್ತ್ರಿ, ಶಿವಣ್ಣ, ಅಶ್ವತ್ಥ ನಾರಾಯಣ, ಭಾಸ್ಕರ್, ಉಮೇಶ್, ರಾಜಪ್ಪ, ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.