ADVERTISEMENT

ತಹಶೀಲ್ದಾರ್ ವಿರುದ್ಧ ರೈತರ ದೂರು

​ಪ್ರಜಾವಾಣಿ ವಾರ್ತೆ
Published 5 ಮೇ 2012, 5:15 IST
Last Updated 5 ಮೇ 2012, 5:15 IST
ತಹಶೀಲ್ದಾರ್ ವಿರುದ್ಧ ರೈತರ ದೂರು
ತಹಶೀಲ್ದಾರ್ ವಿರುದ್ಧ ರೈತರ ದೂರು   

ತುರುವೇಕೆರೆ: ತಹಶೀಲ್ದಾರ್ ಟಿ.ಆರ್. ಶೋಭಾ ಅವರು ಪಾಲು ಪಾರಿಕತ್ತು ದಾಖಲೆಗಳನ್ನು ಕಡ್ಡಾಯ ನೋಂದಣಿ ಮಾಡಿಸಬೇಕೆಂದು ಕಡ್ಡಾಯಗೊಳಿಸಿ ತೊಂದರೆ ನೀಡುತ್ತಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿ ಬಳಿ ಗೋಳು ತೋಡಿ ಕೊಂಡ ಘಟನೆ ಶುಕ್ರವಾರ ನಡೆಯಿತು.

ಶಾಸಕ ಎಂ.ಟಿ.ಕೃಷ್ಣಪ್ಪ ಜೊತೆ ಜಿಲ್ಲಾಧಿಕಾರಿ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ರೈತರು ಜಿಲ್ಲಾಧಿಕಾರಿ ರಾಜು ಅವರಿಗೆ ಪಾಲು ಪಾರಿಕತ್ತು ನೋಂದಣಿ ಸಮಸ್ಯೆಗಳನ್ನು  ಬಿಚ್ಚಿಟ್ಟರು. 30- 40 ವರ್ಷದ ಹಿಂದಿನ ಪಾಲು ಪಾರಿಕತ್ತು ದಾಖಲೆಗಳನ್ನು ನೋಂದಣಿ ಮಾಡಿಸಲು ತಹಶೀಲ್ದಾರ್ ಟಿ.ಆರ್. ಶೋಭಾ ಒತ್ತಾಯಿಸುತ್ತಿದ್ದಾರೆ.

ಈಗಾಗಲೇ ಪವತಿ ಹೊಂದಿರುವವರ ಪ್ರತ್ಯೇಕ ಮರಣ ಪ್ರಮಾಣ ಪತ್ರ ಪಡೆಯಲು ನ್ಯಾಯಾಲಯಕ್ಕೆ ಅಲೆಯ ಬೇಕು. ಆಸ್ತಿ ಸರ್ವೆ ನಕ್ಷೆ ಪಡೆಯಬೇಕು. ಹಕ್ಕುದಾರರನ್ನೆಲ್ಲಾ  ನೋಂದಣಿ ಕಚೇರಿಗೆ ಕರೆತರಬೇಕು. ಇದರಿಂದ ಅನಗತ್ಯ ಕಿರುಕುಳ ಹಾಗೂ ದುಡ್ಡಿನ ವ್ಯಯವಾಗುತ್ತಿದೆ.  ಕಂದಾಯ ಇಲಾಖೆ ಇಂತಹ ಯಾವುದೇ ಆದೇಶ ನೀಡ ದಿದ್ದರೂ ತಹಶೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳು ಜನರಿಗೆ ಕಿರು ಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಇಲಾಖೆ ಈ ಸಂಬಂಧ ಯಾವುದೇ ಸೂಚನೆ ನೀಡಿಲ್ಲ ಎಂದ ಜಿಲ್ಲಾಧಿಕಾರಿ, ಈ ಬಗ್ಗೆ ತಹಶೀಲ್ದಾರ್ ಅವರಿಂದ ವಿವರಣೆ ಪಡೆದು ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಶಾಸಕರ ಧರಣಿ ಅಂತ್ಯ
ತಾಲ್ಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಸ್ಥಳಕ್ಕೆ ಭೇಡಿ ನೀಡಿದ್ದ ಜಿಲ್ಲಾಧಿಕಾರಿ ಆರ್.ಕೆ.ರಾಜು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಶುಕ್ರವಾರ ಮಧ್ಯಾಹ್ನ ಅಂತ್ಯಗೊಳಿಸಿದರು.

ವಿಭಾಗಾಧಿಕಾರಿ ಶಿಲ್ಪಾ, ತಹಶೀಲ್ದಾರ್ ಟಿ.ಆರ್.ಶೋಭಾ, ಜಿ.ಪಂ. ಸದಸ್ಯ ಶ್ರಿನಿವಾಸ್, ಜೆಡಿಎಸ್ ಮುಖಂಡರಾದ ಸ್ವಾಮಿ, ಎಚ್.ಆರ್. ರಾಮೇಗೌಡ, ಶಂಕರೇಗೌಡ, ವೆಂಕಟರಾಮ್, ಗಂಗಾಧರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.