ADVERTISEMENT

ತಾಲ್ಲೂಕು ಕಚೇರಿಗೆ ಎತ್ತು-ಗಾಡಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 5:15 IST
Last Updated 14 ಜುಲೈ 2012, 5:15 IST

ಪಾವಗಡ: ದನ-ಕರು ಮೇವಿಲ್ಲದೆ ಸಾಯುತ್ತಿವೆ. ಮೇವು ನೀಡಿ ಎಂದು ಒತ್ತಾಯಿಸಿ ತಾಲ್ಲೂಕಿನ ರೈತರು ತಾಲ್ಲೂಕು ಕಚೇರಿ ಮುಂದೆ ಎತ್ತು-ಗಾಡಿಗಳೊಂದಿಗೆ ಶುಕ್ರವಾರ ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿ ನಡೆಯಿತು.

ಪಟ್ಟಣದ ರಾಮಕೃಷ್ಣಾಶ್ರಮದಲ್ಲಿ ಜಪಾನಂದಜೀ ಉಚಿತವಾಗಿ ಮೇವು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದಕ್ಕೆ ಪೂರ್ವ ನಿಗದಿಯಾಗಿ ಟೋಕನ್ ಹಂಚಲಾಗಿತ್ತು. ಆದರೆ ಟೋಕನ್ ಪಡೆಯದ ರೈತರು ಬಂದಿದ್ದರು. ಮೇವು ಸಿಗುವುದಿಲ್ಲ ಎಂದು ಖಾತ್ರಿಯಾದ ತಕ್ಷಣ ನೆರೆದಿದ್ದ ರೈತರು ತಾಲ್ಲೂಕು ಕಚೇರಿ ಬಳಿ ಜಮಾಯಿಸಿ ಮೇವಿಗೆ ಆಗ್ರಹಿಸಿದರು.

ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು. ಇದರಿಂದ ಎರಡು ಗಂಟೆಗೂ ಹೆಚ್ಚು ಕಾಲ ಪ್ರಯಾಣಕ್ಕೆ ತೊಂದರೆ ಉಂಟಾಯಿತು. ಮಳೆಯಿಲ್ಲ, ಮೇವಿಲ್ಲದೆ ಗಿಡಗಳ ಸೊಪ್ಪನ್ನು ಕತ್ತರಿಸಿ ದನ-ಕರುಗಳಿಗೆ ಹಾಕಲಾಗುತ್ತಿದೆ. ಎಷ್ಟು ಮನವಿ ಮಾಡಿದರೂ ತಾಲ್ಲೂಕು ಆಡಳಿತ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ತಹಶೀಲ್ದಾರ್ ಸಿದ್ದಲಿಂಗಪ್ಪ ರೈತರೊಂದಿಗೆ ಚರ್ಚಿಸಿ ಭಾನುವಾರದಿಂದ ಗೋಶಾಲೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಧರಣಿ ನಿಲ್ಲಿಸಿದರು.

ಮೇವು ಹಂಚಿ: ಗೋಶಾಲೆಗಳಿಗಿಂತ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇವು ಹಂಚಬೇಕು ಎಂದು ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ದೂರದ ಊರುಗಳಿಂದ ಗೋಶಾಲೆಗೆ ದನಕರು ಹೊಡೆದು ಕೊಂಡು ಬರುವುದಕ್ಕೆ ಆಗುವುದಿಲ್ಲ. ಮೇವು ಹಂಚುವುದೇ ಒಳಿತು ಎಂದು ರೈತರು ಒತ್ತಾಯಿಸಿದ್ದಾರೆ.

ಕೆಲಸ ಕೊಡಿ
ಬರ ಕಾಡುತ್ತಿದೆ. ಕೆಲಸವಿಲ್ಲದೆ ವಲಸೆ ಹೆಚ್ಚುತ್ತಿದೆ. ಮೇವಿನ ಹಾಹಾಕಾರ ತೀವ್ರಗೊಂಡಿದೆ. ಉದ್ಯೋಗ ಖಾತ್ರಿಯಡಿ ಕೂಲಿ ನೀಡಿ ಎಂದು ಮಾಜಿ ನಕ್ಸಲೀಯ ರಾಯಚೆರ‌್ಲು ಸುಬ್ಬರಾಯ ತಿರುಮಣಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.