ತಿಪಟೂರು: ನಗರದ ದೊಡ್ಡಪೇಟೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಕಳೆದ ವಾರ ಚಾಲನೆ ನೀಡಿದ್ದ ನಗರಾಡಳಿತ ಸೋಮವಾರ ಸಿಂಗ್ರಿನಂಜಪ್ಪ ವೃತ್ತದಿಂದ ರೈಲು ನಿಲ್ದಾಣದವರೆಗಿನ ರಸ್ತೆ ಒತ್ತುವರಿ ತೆರವಿಗೆ ಮುಂದಾಯಿತು.
ಸಿಂಗ್ರಿನಂಜಪ್ಪ ವೃತ್ತದಲ್ಲಿರುವ ಪೈ ಹೋಟ್ಲ್ನ ಕಾಂಪೌಂಡ್ ಹಾಗೂ ಕಟ್ಟಡಕ್ಕೆ ಹೊಂದಿಕೊಂಡಂತೆ ಇದ್ದ ಶೌಚಾಲಯವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ತಿಂಗಳ ಹಿಂದೆ ದೊಡ್ಡಪೇಟೆಯ ಚರಂಡಿ ಕಾಮಗಾರಿ ಆರಂಭ ಸಂಬಂಧ ನಡೆದ ಭೂಮಿ ಪೂಜೆ ವೇಳೆ, ‘ಸದ್ಯದಲ್ಲಿಯೆ ರೈಲು ನಿಲ್ದಾಣ ರಸ್ತೆ ಮತ್ತು ಕಾರೋನೇಷನ್ ರಸ್ತೆಗಳ ವಿಸ್ತರಣೆ ಆರಂಭಿಸಲಾಗುವುದು’ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದ್ದರು.
ಆದರೆ ಇಷ್ಟು ಶೀಘ್ರವಾಗಿ ಕಾರ್ಯಾಚರಣೆ ಆರಂಭವಾಗುತ್ತದೆ ಎಂಬ ಸಣ್ಣ ಸುಳಿವನ್ನೂ ನೀಡದೆ, ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿರುವುದು ಕೆಲವು ನಾಗರಿಕರಲ್ಲಿ ಆತಂಕ ಉಂಟುಮಾಡಿದೆ.
ನಗರಸಭೆ ಕಂದಾಯ ಅಧಿಕಾರಿ ಈಶ್ವರಪ್ಪ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ತಂಡ, ರೈಲು ನಿಲ್ದಾಣ ರಸ್ತೆಯ ಒಂದು ಬದಿ ಕಟ್ಟಡಗಳ ಒತ್ತುವರಿಯನ್ನು ಗುರುತು (ಮಾರ್ಕಿಂಗ್) ಮಾಡಿತು. ಪೈ ಹೋಟಲ್ ಕಟ್ಟಡ ಕಾಂಪೌಂಡ್, ಶೌಚಾಲಯ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ಗುರುತು ಹಾಕಿದ ಕೆಲವೇ ನಿಮಿಷಗಳಲ್ಲಿ ನಗರಾಡಳಿತಕ್ಕೆ ಸೇರಿದ ಜೆಸಿಬಿ ಆ ಭಾಗವನ್ನು ನೆಲಕ್ಕುರುಳಿಸಿತು.
ಸ್ಥಳದಲ್ಲಿದ್ದ ಕಂದಾಯಾಧಿಕಾರಿ ಈಶ್ವರಪ್ಪ ಕಾರ್ಯಾಚರಣೆ ಬಗ್ಗೆ ‘ಪ್ರಜಾವಾಣಿ’ಗೆ ಮಾತನಾಡಿ, ಸಿಡಿಪಿ ಯೋಜನೆ ಪ್ರಕಾರ ರೈಲು ನಿಲ್ದಾಣದ ರಸ್ತೆ ವಿಸ್ತೀರ್ಣ 40 ಅಡಿ. ಆದರೆ ಈ ರಸ್ತೆ ಇಕ್ಕೆಲಗಳ ಕಟ್ಟಡ ಮಾಲೀಕರು ಸೆಟ್ ಬ್ಯಾಕ್ ಸ್ಥಳವನ್ನು ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ. ಸುಮಾರು 1.5 ಮೀಟರ್ ಒತ್ತುವರಿಯಾಗಿರುವುದು ಕಂಡು ಬಂದಿದೆ. ಅದನ್ನು ಗುರುತಿಸಿ ಕಟ್ಟಡಗಳ ಮಾಲೀಕರ ಗಮನಕ್ಕೆ ತರುವ ಕಾರ್ಯ ಆರಂಭಿಸಿದ್ದೇವೆ. ಸ್ವತಃ ತೆರವಿಗೆ ಮುಂದಾಗುವ ಕಟ್ಟಡ ಮಾಲೀಕರಿಗೆ ನಗರಾಡಳಿತ ಜೆಸಿಬಿ ಯಂತ್ರ ನೀಡುವ ಮೂಲಕ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ಪೈ ಹೋಟೆಲ್ ಕಟ್ಟಡದ ಒತ್ತುವರಿ ಭಾಗ ತೆರವುಗೊಳಿಸಿದ ನಂತರ ಮತ್ತೆ ಯಾವುದೇ ಕಟ್ಟಡದ ಒತ್ತುವರಿ ತೆರವು ಮಾಡದೆ ಜೆಸಿಬಿ ಸ್ಥಳದಿಂದ ಮಾಯವಾದ ರೀತಿ ನಿಗೂಢವಾಗಿಯೇ ಉಳಿಯಿತು.
ನಗರಾಡಳಿತ ದಿಢೀರ್ ಕಾರ್ಯಾಚರಣೆ ಬಗ್ಗೆ ಅಸಮಾಧಾನ ತೋಡಿಕೊಂಡ ಹೋಟೆಲ್ ಮಾಲೀಕ ರಮಾಕಾಂತ್ ಪೈ, ಕಟ್ಟಡ ಮಾಲೀಕರ ಒಪ್ಪಿಗೆ ನೆಪ ಮುಂದಿಟ್ಟುಕೊಂಡು, ಬಾಡಿಗೆದಾರನಾದ ನನಗೆ ಯಾವ ತಿಳಿವಳಿಕೆ ನೀಡದೆ ತೆರವು ಕಾರ್ಯಾಚರಣೆಯನ್ನು ಏಕಾಏಕಿ ನಡೆಸಿದ್ದನ್ನು ಪ್ರಶ್ನಿಸಿದರು. ಚರಂಡಿ ಕಾಮಗಾರಿ ನಡೆದಿರುವ ದೊಡ್ಡಪೇಟೆ ರಸ್ತೆಯಲ್ಲಿ ಉದ್ಭವವಾಗದ ಸೆಟ್ ಬ್ಯಾಕ್ ಒತ್ತುವರಿ ಪ್ರಶ್ನೆ ಈ ರಸ್ತೆಯಲ್ಲಿ ಉದ್ಭವವಾದದ್ದು ಹೇಗೆ ಎಂದು ಕಿಡಿ ಕಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.