ADVERTISEMENT

ತಿಪಟೂರು: ಸರಸ್ವತಿ ಮತ್ತೆ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 9:25 IST
Last Updated 7 ಮಾರ್ಚ್ 2012, 9:25 IST

ತಿಪಟೂರು: ಅವಿಶ್ವಾಸ ನಿರ್ಣಯದ ಮೂಲಕ ನಗರಸಭೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡಿದ್ದ ಬಿಜೆಪಿ ಸರಸ್ವತಿ ಮೀಸಲು ಬಲದಿಂದ ಮತ್ತೆ ಅಧ್ಯಕ್ಷ ಗಾದಿಗೇರಿದರೆ ವಿರೋಧಿ ಕಾಂಗ್ರೆಸ್- ಜೆಡಿಎಸ್ ಗುಂಪು ಟಿ.ಎನ್.ಪ್ರಕಾಶ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸರಸ್ವತಿ, ಕಾಂಗ್ರೆಸ್‌ನ ಹೇಮಾವತಿ, ಪಕ್ಷೇತರ ಶ್ರಿನಿವಾಸ್ ನಾಮಪತ್ರ ಸಲ್ಲಿಸಿದ್ದರು. ಉಪಾ ಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಟಿ.ಎನ್.ಪ್ರಕಾಶ್, ಕಾಂಗ್ರೆಸ್‌ನ ಎಂ.ನಾಗರಾಜ್ ಮತ್ತು  ಬಿಜೆಪಿಯ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಶ್ರಿನಿವಾಸ್ ಮತ್ತು ಹೇಮಾವತಿ ನಾಮಪತ್ರ ಅಸಿಂಧುವಾದವು. ಸರಸ್ವತಿ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಲಾ ಯಿತು. ಎಂ.ನಾಗರಾಜ್ ಮತ್ತು ಮಂಜುನಾಥ್ ನಾಮ ಪತ್ರ ವಾಪಸ್ ಪಡೆದಿದ್ದರಿಂದ ಉಪಾಧ್ಯಕ್ಷರಾಗಿ ಪ್ರಕಾಶ್ ಅವಿರೋಧ ಆಯ್ಕೆಯಾದರು.

ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಪರಿಶಿಷ್ಟ ಜಾತಿ ಮಹಿಳೆ ಮತ್ತು ಹಿಂದುಳಿದ ವರ್ಗ `ಅ  ಮೀಸಲು ನಿಗದಿಯಾಗಿತ್ತು. ಅವಧಿ ಪೂರ್ಣಗೊಳ್ಳುವ ಮುನ್ನವೇ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಮಂಜುನಾಥ್ ಪದಚ್ಯುತಗೊಂಡಿದ್ದರಿಂದ ಅದೇ ಮೀಸಲು ಆಧಾರದಲ್ಲಿ ಈ ಚುನಾವಣೆ ನಡೆ ಯಿತು.

ನಗರಸಭೆಯ 31 ಸದಸ್ಯರ ಪೈಕಿ ಪರಿಶಿಷ್ಟ ಜಾತಿ ಮಹಿಳೆ ಮೀಸಲಿನಿಂದ ಆಯ್ಕೆಯಾಗಿದ್ದವರು ಬಿಜೆಪಿಯ ಸರಸ್ವತಿ ಮಾತ್ರ. ಹಾಗಾಗಿ ಅವಿಶ್ವಾಸದ ಮೂಲಕ ಪದಚ್ಯುತಗೊಂಡರೂ ಮೀಸಲು ಬಲದಿಂದ ಮತ್ತೆ ಅವರೇ ಅಧ್ಯಕ್ಷರಾದರು. ಅವಿಶ್ವಾಸ ಮಂಡಿಸಿ ಗೆದ್ದು ಉಪಾಧ್ಯಕ್ಷ ಸ್ಥಾನ ಹಿಡಿದ ವಿರೋಧಿ ಗುಂಪು ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕೈಚೆಲ್ಲಬೇಕಾಯಿತು.

ಆಕ್ಷೇಪ: ನಗರಸಭೆ ಸದಸ್ಯ ಚುನಾವಣೆ ಸಂದರ್ಭದಲ್ಲಿ ಸರಸ್ವತಿ ನೀಡಿದ್ದ ಜಾತಿ ಪ್ರಮಾಣ ಪತ್ರವನ್ನು ತಾಲ್ಲೂಕು ದಂಡಾಧಿಕಾರಿ ವಜಾಗೊಳಿಸಿರುವುದರಿಂದ ಅವರ ನಾಮಪತ್ರ ತಿರಸ್ಕರಿಸಬೇಕೆಂದು ಸದಸ್ಯ ಎಂ.ನಾಗರಾಜು ಮತ್ತು ಎಂ.ಆರ್.ದಿನೇಶ್‌ಕುಮಾರ್ ದಾಖಲೆ ಸಹಿತ ಸಭೆಯಲ್ಲಿ ಆಕ್ಷೇಪ ಎತ್ತಿದರು.
 
ಚುನಾವಣಾಧಿಕಾರಿ ಯಾಗಿದ್ದ ಎಸಿ ಎಂ.ಶಿಲ್ಪಾ ಆಕ್ಷೇಪವನ್ನು ತಳ್ಳಿ ಹಾಕಿ, ಆ ವಿವಾದ ನ್ಯಾಯಾಲಯದಲ್ಲಿದೆ. ರಾಜ್ಯ ಪತ್ರದ ಪ್ರಕಾರ ಸರಸ್ವತಿ ಅವರು ಈಗಲೂ `ಪರಿಶಿಷ್ಟ ಜಾತಿ ಮಹಿಳೆ ಮೀಸಲಿಂದ ಆಯ್ಕೆಯಾದ ಸದಸ್ಯೆ. ಹಾಗಾಗಿ ತಿರಸ್ಕರಿಸ ಲಾಗದು~ ಎಂದು ತಿಳಿಸಿ ಅವರ ಅವಿರೋಧ ಆಯ್ಕೆ ಘೋಷಿಸಿದರು.

ಚುನಾವಣೆ ನಂತರ ಪತ್ರಕರ್ತರ ಜತೆ ಮಾತನಾಡಿದ ಎಂ. ನಾಗರಾಜು, ತಹಶೀಲ್ದಾರರ ಆದೇಶ ಧಿಕ್ಕರಿಸಿ ಚುನಾವಣಾಧಿಕಾರಿ ಶಾಸಕರ ಕೈಗೊಂಬೆಯಂತೆ ವರ್ತಿಸಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ಸಂಭ್ರಮ: ಜೆಡಿಎಸ್- ಕಾಂಗ್ರೆಸ್ ಗುಂಪಿನ ಸದಸ್ಯರು ಪ್ರಕಾಶ್ ಅವರನ್ನು ಅಭಿನಂದಿಸಿ ಸಿಂಗ್ರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿಯ ಕೆಲ ಸದಸ್ಯರು ಮತ್ತು ಶಾಸಕ ಬಿ.ಸಿ.ನಾಗೇಶ್ ಅಧ್ಯಕ್ಷೆ ಸರಸ್ವತಿ ಅವರನ್ನು ಅಭಿನಂದಿಸಿದರು.

ಜಾತಿ ಕಾರಣ: ತಾನು ಪರಿಶಿಷ್ಟ ಮಹಿಳೆ ಎಂಬ ಕಾರಣಕ್ಕೆ ಸುಸೂತ್ರವಾಗಿ ಆಡಳಿತ ನಡೆಸಲು ಕೆಲ ಸದಸ್ಯರು ಹಿಂದೆ ಅವಕಾಶ ನೀಡದೆ ಆಗಾಗ್ಗೆ ಆತ್ಮವಿಶ್ವಾಸ ಕುಗ್ಗಿಸುತ್ತಾ ಬಂದಿದ್ದರು. ಅವಿಶ್ವಾಸದ ಮೂಲಕ ಹುದ್ದೆಯಿಂದ ಕೆಳಗಿಳಿಸಿ ಸಂಭ್ರಮಿಸಿದ್ದರು. ಸಂವಿಧಾನ ಬಲದಿಂದ ಮತ್ತೆ ಆ ಭಾಗ್ಯ ಒದಗಿಬಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.