ತುಮಕೂರು: ‘ದೇವತೆಗಳು ನೆಲೆಸಿರುವ ನಾಡೆಂದೇ ಹೆಸರಾಗಿರುವ ತುಮಕೂರು ಗ್ರಾಮಾಂತರ ಕ್ಷೇತ್ರ ಬರ ಮುಕ್ತ ಕ್ಷೇತ್ರವಾಗಿದೆ’ ಎಂದು ಶಾಸಕ ಬಿ.ಸುರೇಶ್ಗೌಡ ತಿಳಿಸಿದರು. ತಾಲ್ಲೂಕಿನ ದೇವರ ಅಮಾನಿಕೆರೆ ಕೋಡಿ ಹರಿದ ಕಾರಣ ಕೆರೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
‘18 ವರ್ಷಗಳ ನಂತರ ಕೆರೆ ಕೋಡಿಯಾಗಿದೆ. ಇದರಿಂದಾಗಿ ಸರಣಿ ಕೆರೆಗಳಾದ ಹೊನ್ನುಡುಕೆ, ಮುಳುಕುಂಟೆ, ವೀರನಾಯನಹಳ್ಳಿ ಸಿಂಗಾದರ ಅಣೆ, ನಾಗವಲ್ಲಿ, ಹೊಳಕಲ್ಲು ಕೆರೆಗಳು ತುಂಬಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಐದು ವರ್ಷಗಳಿಂದ ಈ ಭಾಗದಲ್ಲಿ ಪಿಕಪ್, ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ₹ 2 ಕೋಟಿ ವೆಚ್ಚದಲ್ಲಿ ರಾಯಗಾಲುವೆ ಒತ್ತುವರಿ ತೆರವುಗೊಳಿಸಲಾಗಿತ್ತು. ಹೀಗಾಗಿ ಮಳೆ ನೀರು ಸೀದಾ ಕೆರೆಗೆ ಹರಿದುಬಂದು ಕೆರೆ ತುಂಬುವಂತಾಯಿತು’ ಎಂದು ತಿಳಿಸಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ದೇವರಾಯನದುರ್ಗದ ನರಸಿಂಹಸ್ವಾಮಿ, ಚಿಕ್ಕಸೀಬಿ ನರಸಿಂಹಸ್ವಾಮಿ, ನಾಮದ ಚಿಲುಮೆ, ಸಿದ್ಧಗಂಗಾ ಮಠ, ಹೆತ್ತೇನಹಳ್ಳಿ, ಗೂಳೂರು ಗಣೇಶ, ಹೆಬ್ಬೂರು ಕಾಮಾಕ್ಷಿ ಮಠ, ಕೈದಾಳ ಚನ್ನಕೇಶವ, ಅರಿಯೂರು ವೈದ್ಯನಾಥೇಶ್ವರ, ನಿಡುವಳಲು ಲಕ್ಮೀ ಜಿನಮಂದಿರ ಹೀಗೆ ಹತ್ತು ಹಲವು ಕ್ಷೇತ್ರಗಳಿವೆ. ಇದು ಕ್ಷೇತ್ರದ ವಿಶೇಷವಾಗಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಸಿದ್ದೇಗೌಡ, ಮುಖಂಡರಾದ ನರಸಿಂಹಮೂರ್ತಿ, ರಾಮಸ್ವಾಮಿಗೌಡ, ನೀಲಕಂಟಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.