
ತೋವಿನಕೆರೆ: ಸುತ್ತಮುತ್ತಲ ಪ್ರದೇಶಗಳಲ್ಲಿ ಬುಧವಾರ ರಾತ್ರಿ 8ರಿಂದ ಗುರುವಾರ ಮುಂಜಾನೆ 5ರವರೆಗೆ ಒಟ್ಟು 14.4 ಸೆಂ.ಮೀ ಮಳೆಯಾಗಿದೆ.
ಮಳೆ ಇಲ್ಲದೆ ಒಣಗುವ ಸ್ಥಿತಿ ತಲುಪಿದ್ದ ರಾಗಿ, ಮೇವಿನಜೋಳದ ಹೊಲಗಳಿಗೆ ನೀಲಂ ಚಂಡ ಮಾರುತದಿಂದಾಗಿ ಮತ್ತೊಮ್ಮೆ ಜೀವ ಬಂದಿದೆ. ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ.
ಮಳೆಯಿಂದಾಗಿ ಸಿದ್ದರಬೆಟ್ಟದ ತಪ್ಪಲಿನಲ್ಲಿರುವ ಅನೇಕ ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿವೆ. ಸುಮಾರು 50 ಎಕರೆ ವಿಸ್ತೀರ್ಣದ ತೋವಿನಕೆರೆ ಸಮೀಪದ ಸೂಳೆಕೆರೆಗೆ ಬೆಟ್ಟದ ನೀರು ಹರಿದು ಬಂದಿದೆ. ಕೆರೆ ಕೋಡಿ ಹೋಗುತ್ತಿರುವುದರಿಂದ ಸುತ್ತಮುತ್ತಲ ನೂರಾರು ಕೊಳವೆಬಾವಿಗಳಲ್ಲಿ ನೀರು ಬರಬಹುದು ಎಂದು ಸೂರೇನಹಳ್ಳಿ ಗ್ರಾಮಸ್ಥರಾದ ಎಸ್.ಆರ್.ಚಂದ್ರಮೋಹನ್ ಸಂತಸ ವ್ಯಕ್ತಪಡಿಸಿದರು.
ಬಿರುಕು ಬಿಟ್ಟ ಕೆರೆ
ಮಧುಗಿರಿ: ಬುಧವಾರ ರಾತ್ರಿಯಿಡಿ ಸುರಿದ ಮಳೆಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಚೋಳೇನಹಳ್ಳಿ ಕೆರೆಯು ತೂಬಿನ ಬಳಿ ಬಿರುಕುಬಿಟ್ಟಿದೆ. ಇದರಿಂದ ಅಚ್ಚುಕಟ್ಟುದಾರರು ಆತಂಕಗೊಂಡಿದ್ದಾರೆ.
300 ವರ್ಷ ಇತಿಹಾಸವುಳ್ಳ ಕೆರೆಯು ಸಣ್ಣ ನೀರಾವರಿ ಇಲಾಖೆಗೆ ವ್ಯಾಪ್ತಿಗೆ ಒಳಪಟ್ಟಿದೆ. ಕೆರೆಯಲ್ಲಿ ಸಂಗ್ರಹವಾಗಿರುವ 57 ಎಂಸಿಎಂಟಿ ನೀರನ್ನು 157 ಹೆಕ್ಟೇರ್ ಪ್ರದೇಶದ ಅಚ್ಚುಕಟ್ಟುದಾರರು ಬಳಸಿಕೊಳ್ಳುತ್ತಿದ್ದಾರೆ.
ಕೆರೆ ಏರಿ ತೂಬಿನ ಬಳಿ ಬಿರುಕು ಬಿಟ್ಟಿರುವ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂಜೀವರಾಯಪ್ಪ,ಕಿರಿಯಎಂಜಿನಿಯರ್ ರಮೇಶ್, ಮೇಲ್ವಿಚಾರಕ ಲಕ್ಕಪ್ಪ, ಕರಿಯಣ್ಣ ಮತ್ತು ಕೆರೆ ನೀರು ಬಳಕೆದಾರರ ಸಂಘದ ಶ್ರೀರಾಮ್, ರಂಗಣ್ಣ, ವೆಂಕಟೇಶ್, ರಂಗರಾಜು ಹಾಗೂ ಅನೇಕ ರೈತರು ಕಂದಕ ಮುಚ್ಚುವ ಕೆಲಸದಲ್ಲಿ ಕೈಗೂಡಿಸಿದರು.
ತಾಲ್ಲೂಕಿನಲ್ಲಿ ನಾಲ್ಕು ವರ್ಷಗಳಿಂದ ಮಳೆ ಸಮರ್ಪಕವಾಗಿ ಬಂದಿಲ್ಲ. ಕೆರೆಯಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ. ಬುಧವಾರ ರಾತ್ರಿ ರಭಸವಾಗಿ ಮಳೆ ಬಿದ್ದ ಕಾರಣ ನೀರಿನ ಸಂಗ್ರಹ ಹೆಚ್ಚಾಗಿ ತೂಬಿನ ಬಳಿ ಕಂದಕ ಕಾಣಿಸಿಕೊಂಡಿದೆ. ಅಚ್ಚುಕಟ್ಟುದಾರರು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಕಾಲದಲ್ಲಿ ಬಿರುಕು ಮುಚ್ಚಲು ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ತಿಳಿಸಿದರು.
`ಕೆರೆಯ ತೂಬನ್ನು ಸುಣ್ಣದ ಚುರುಕಿ ಹಾಗೂ ಕಲ್ಲಿನಿಂದ ನಿರ್ಮಿಸಲಾಗಿದೆ. ಬಿರುಕು ಬಿಟ್ಟಿರುವ ಸ್ಥಳದಲ್ಲಿ ಬಹುಕಾಲದಿಂದ ನೀರು ಜಿನುಗುತ್ತಿತ್ತು. ಮಳೆಯ ರಭಸಕ್ಕೆ ಮಣ್ಣು ಕುಸಿದಿದೆ. 1000 ಮೀಟರ್ ಉದ್ದದ ಕೆರೆ ಏರಿಯಲ್ಲಿ ಹೊಸದಾಗಿ ತೂಬು ನಿರ್ಮಿಸಲು ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಂಜೀವರಾಯಪ್ಪ ಅಚ್ಚುಕಟ್ಟುದಾರರಿಗೆ ಭರವಸೆ ನೀಡಿದರು.
ಮಳೆಗೆ ಕುಸಿದ ಗೋಡೆ
ಚಿಕ್ಕನಾಯಕನಹಳ್ಳಿ: ನಿರಂತರ ಮಳೆಗೆ ಮನೆಯೊಂದರ ಗೋಡೆ ಕುಸಿದ ಘಟನೆ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.
ನಗರದ 16 ನೇ ವಾಡ್ನ ಉಡೇವು ಬೀದಿಯಲ್ಲಿ ಬುಧವಾರ ರಾತ್ರಿಯಿಡಿ ಸುರಿದ ಮಳೆಗೆ ಹಳೆಮನೆಯ ಗೋಡೆಯೊಂದು ಕುಸಿಯಿತು. ಈ ಮನೆಯಲ್ಲಿ ಯಾರು ವಾಸವಿರಲಿಲ್ಲ. ಗೋಡೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನ, ಎದುರು ಮನೆಯ ಹೆಂಚು ಹಾಗೂ ಸಿಮೆಂಟ್ಶೀಟ್ಗಳಿಗೆ ಹಾನಿಯಾಗಿದೆ.
ಸ್ಥಳಕ್ಕೆ ಆಗಮಿಸಿದ ಪುರಸಭಾ ಸದಸ್ಯ ಬಾಬುಸಾಬ್ ಮಾತನಾಡಿ ಅಪಾಯಕಾರಿಯ ಸ್ಥಿತಿಯಲ್ಲಿ ಶಿಥಿಲ ಗೋಡೆಯನ್ನು ಹಾಗೆಯೆ ಉಳಿಸಿರುವ ಮನೆಯ ಮಾಲಿಕರಿಗೆ ನೊಟೀಸ್ ಜಾರಿ ಮಾಡಲಾಗುವುದು ಎಂದರು.
ಕಂದಾಯ ಇಲಾಖೆ ಅಧಿಕಾರಿ ಸತ್ಯನಾರಾಯಣರಾವ್ ಮಹಜರ್ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.