ಕೊಡಿಗೇನಹಳ್ಳಿ: ಹೋಬಳಿ ಗುಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಚೈತನ್ಯ ಸಿಂಚನ ಸಂಸ್ಥೆಯಿಂದ ಸುಮಾರು 25 ಶಾಲೆ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ಪ್ರದರ್ಶನ, ಪ್ರತಿಭಾ ಪುರಸ್ಕಾರ, ಬೀದಿ ನಾಟಕ, ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಚೈತನ್ಯ ಸಿಂಚನ ಸಂಸ್ಥೆಯ ವ್ಯವಸ್ಥಾಪಕ ಸಿ.ವಿ.ಕುಮಾರ್ ಮಾತನಾಡಿ, ‘ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವರಿಂದ ದೇಣಿಗೆ ಪಡೆದು ಅದನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುತ್ತಿದೆ’ ಎಂದರು.
‘ಚೈತನ್ಯ ಸಿಂಚನ ಸಂಸ್ಥೆ ಇದು ಒಂದು ಸಾಮಾಜಿಕ, ಶೈಕ್ಷಣಿಕ ದತ್ತಿ ಸಂಸ್ಥೆ. 2010ರಲ್ಲಿ ಈ ಸಂಸ್ಥೆಯನ್ನು ಜೀವ ವಿಮಾ ನೌಕರರು ನಡೆಸುವ ಸಹಕಾರ ಬ್ಯಾಂಕ್ ನವರು ಆರಂಭಿಸಿದ್ದು ಇಂದು ಹೆಮ್ಮರವಾಗಿ ಬೆಳೆದು ಇತರರಿಗೆ ನೆರಳು ನೀಡುತ್ತಿದೆ’ ಎಂದು ತಿಳಿಸಿದರು.
‘ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಮತ್ತು ಐ.ಡಿ.ಹಳ್ಳಿ ಹೋಬಳಿಗಳ ಸರ್ಕಾರಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ವಿವಿಧ ಬಗೆಯ ಸವಲತ್ತು ನೀಡುತ್ತಿದೆ. 2006 ರಲ್ಲಿ ತಿಪ್ಪಾಪುರ ಮತ್ತು ಅಡವಿನಾಗೇನಹಳ್ಲಿ ಶಾಲೆಗಳಿಗೆ ಅನೌಪಚಾರಿಕವಾಗಿ 30 ಡೆಸ್ಕ್ಗಳನ್ನು ನೀಡುವ ಮೂಲಕ ಸೇವಾ ಕೆಲಸ ಆರಂಭಿಸಿತು. ನಂತರ ದಿನಗಳಲ್ಲಿ ಬಿಸಿಯೂಟಕ್ಕಾಗಿ ತಟ್ಟೆ, ಲೋಟ, ಕುಕ್ಕರ್, ಆಟದ ಸಾಮಾಗ್ರಿ, ಬ್ಯಾಂಡ್ ಸೆಟ್, ಕಂಪ್ಯೂಟರ್ ಸಾಮಾಗ್ರಿಗಳನ್ನು ನೀಡಿದೆ’ ಎಂದು ತಿಳಿಸಿದರು.
ಪೊಲೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನರಸಿಂಹಮೂರ್ತಿ ಮಾತನಾಡಿ, ಮಾರ್ಚ್ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ ನಡೆಸುವ ಚೈತನ್ಯ ಸಿಂಚನ ಸಂಸ್ಥೆಯವರ ಸೇವೆ ನಿಜಕ್ಕೂ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.