ADVERTISEMENT

ನಕಲಿ ಮತದಾರರ ಹೆಸರು ತೆಗೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 5:59 IST
Last Updated 30 ಡಿಸೆಂಬರ್ 2017, 5:59 IST

ತುಮಕೂರು: ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ನಕಲಿ ಮತದಾರರ ಹೆಸರು ತೆಗೆದು ಹಾಕಬೇಕು. ಲೋಪ, ದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಬಿಜೆಪಿ ನಗರ ಘಟಕವು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ತುಮಕೂರು ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಆಮಿಷ ತೋರಿಸುತ್ತಿರುವವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೋವಿಂದರಾಜು ಅವರು ನಗರದ ಅಸಂಘಟಿತ ಕಾರ್ಮಿಕರನ್ನು, ಅನಕ್ಷರಸ್ಥರನ್ನು, ಬಡವರನ್ನು, ಕೊಳಚೆ ಪ್ರದೇಶದ ನಿವಾಸಿಗಳನ್ನು, ಅದರಲ್ಲೂ ಮಹಿಳಾ ಮತದಾರರನ್ನು ಬಸ್‌ಗಳಿಗೆ ದೇವಸ್ಥಾನಗಳಿಗೆ ಕರೆದುಕೊಂಡು ಆಮಿಷವೊಡ್ಡಿದ್ದಾರೆ. ಹೆತ್ತೇನಹಳ್ಳಿ ಮಾರಮ್ಮ, ಶೂಲದ ಆಂಜನೇಯಸ್ವಾಮಿ ದೇವಸ್ಥಾನ, ದೇವರಾಯನದುರ್ಗ, ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಗಳಿಗೆ ಕರೆದುಕೊಂಡು ಹೋಗಿದ್ದರು. ₹ 1ರಿಂದ 2 ಸಾವಿರ ಹಣ ಕೊಟ್ಟಿದ್ದಾರೆ ಎಂದು ಆಪಾದಿಸಿದರು.

’ಸಿಂಗಂದೂರು ಚೌಡೇಶ್ವರಿ ಪೋಟೊ ನೀಡಿ ನನಗೆ ಮತ ಹಾಕಬೇಕೆಂದು ಹಾಗೂ ತಾಳಿಯ ಮೇಲೆ, ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡಿಸಿದ್ದಾರೆ. ಇದು ಸಂವಿಧಾನ ವಿರೋಧಿಯಾದುದು. ಇವರು ವಿರುದ್ಧ ಕ್ರಮ ಜರುಗಿಸಬೇಕು, ಇವರಿಗೆ ಸಹಕರಿಸುತ್ತಿರುವ ಕೆಲ ಏಜೆಂಟರಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯ ಮಾಡಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್, ನಗರ ಮಂಡಲ ಅಧ್ಯಕ್ಷ ಸಿ.ಎನ್.ರಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶ್, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಡೆಲ್ಟಾ ರವಿಕುಮಾರ್, ಪಾಲಿಕೆ ಸದಸ್ಯ ಕರುಣಾರಾಧ್ಯ, ಇಂದ್ರಕುಮಾರ್, ನಗರಸಭಾ ಮಾಜಿ ಸದಸ್ಯ ಡಿ.ಆರ್.ಬಸವರಾಜು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.