ADVERTISEMENT

ನಗರದಲ್ಲಿ ಭಯೋತ್ಪಾದಕರ ಕರಿನೆರಳು: ಶಿವಣ್ಣ ಆತಂಕ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 10:17 IST
Last Updated 4 ಸೆಪ್ಟೆಂಬರ್ 2013, 10:17 IST

ತುಮಕೂರು: ಶಂಕಿತ ಭಯೋತ್ಪಾದಕ ಯಾಸಿನ್‌ಭಟ್ಕಳ್ ಕರಿನೆರಳು ನಗರದಲ್ಲಿಯೂ ಇರುವ ಸಾಧ್ಯತೆ ಇದ್ದು, ರಾಜ್ಯ ಗೃಹ ಇಲಾಖೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಸ್.ಶಿವಣ್ಣ ಆಗ್ರಹಿಸಿದರು.

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರುತಿ ನಗರದ ಮನೆಯೊಂದರಲ್ಲಿ ಬಾಂಬ್ ತಯಾರಿಸಿದ್ದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು. ನಗರದ ಸಮುದಾಯ ಭವನವೊಂದರಲ್ಲಿ ಭಯೋತ್ಪಾದಕರು ತಂಗಿದ್ದರು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ನಗರದಲ್ಲಿ ಅಪರಾಧ ಹೆಚ್ಚುತ್ತಿದೆ. ಮೇಳೆಕೋಟೆಯಲ್ಲಿ ಹಸು ಕಳವು ಮಾಡಿ ಕಡಿದು ಹಾಕಿದ್ದ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

ಹೇಮಾವತಿ ಜಲಾಶಯ ತುಂಬಿದ್ದರೂ ಜಿಲ್ಲೆಯ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಶಿರಾ ತಾಲ್ಲೂಕಿನ ಕೆರೆಗಳಿಗೆ ನೀರು ಬಿಡಲಾಗುತ್ತಿದೆ. ನಗರದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಶಿರಾ ತಾಲ್ಲೂಕಿನ ಮರಳು ದಂಧೆಯಲ್ಲಿ ಸಚಿವ ಜಯಚಂದ್ರ ಹಿಂಬಾಲಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಪಿ.ಮಹೇಶ್ ಮಾತನಾಡಿ, ತುಮಕೂರು ನಗರ ಪಾಲಿಕೆ ಘೋಷಣೆ ಮಾಡಿ 6 ತಿಂಗಳ ಒಳಗಾಗಿ ಚುನಾವಣೆ ನಡೆಸಲಿ. ಅಲ್ಲದೆ ವಾರ್ಡ್ ಮತ್ತು ಮೀಸಲಾತಿಯನ್ನು ಮರು ವಿಂಗಡಣೆ ಮಾಡಬೇಕು. ನಗರದ ಅಭಿವೃದ್ಧಿಗೆ ಸರ್ಕಾರ ರೂ. 300 ಕೋಟಿ ನೀಡಬೇಕೆಂದು ಒತ್ತಾಯಿಸಿದರು. ಮುಖಂಡರಾದ ಎಂ.ಬಿ.ನಂದೀಶ್, ನಾಗಭೂಷಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.