ಚಿಕ್ಕನಾಯಕನಹಳ್ಳಿ: ರಸ್ತೆ ಇಲ್ಲ. ಚರಂಡಿ ಸೌಕರ್ಯವಿಲ್ಲ. ಕಾಲೊನಿ ಸುತ್ತ ಬೆಳೆದಿರುವ ಪೊದೆ, ವಿಷಜಂತುಗಳ ಕಾಟ... ಇದು ತಾಲ್ಲೂಕಿನ ಗೋಡೆಕೆರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುವನಹಳ್ಳಿ ಪರಿಶಿಷ್ಟ ಕಾಲೊನಿಯ ಸ್ಥಿತಿ. ಕಾಲೊನಿ ನಡುವೆ ಇರುವ ಹಾಳುಬಾವಿ ಕಾಲೊನಿಯ ಸ್ಥಿತಿಯ ಸಂಕೇತ ಎನ್ನುವಂತಿದೆ.
‘ಮತ ಕೇಳಲು ಬಂದವರು ಚುನಾವಣೆಯಲ್ಲಿ ಗೆದ್ದ ನಂತರ ಇತ್ತ ತಿರುಗಿಯೂ ನೋಡಿಲ್ಲ. ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರೂ ನಿರ್ಲಕ್ಷಿಸುತ್ತಾರೆ’ ಎಂದು ದಲಿತರು ಆರೋಪಿಸುವರು.
ಪಾಳು ಬಾವಿಗೆ ಬಿದ್ದು ಹಲವರು ಕೈ ಕಾಲು ಮುರಿದುಕೊಂಡಿರುವ ಉದಾಹರಣೆಗಳು ಇವೆ. ಬಾವಿಯನ್ನು ಮುಚ್ಚುವಂತೆ ಇಲ್ಲವೆ ಸುರಕ್ಷಾ ಗೋಡೆ ನಿರ್ಮಿಸುವಂತೆ ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಜನರು ದೂರುವರು.
ಕಾಲೊನಿಯಲ್ಲಿ ಒಳ ಚರಂಡಿ ವ್ಯವಸ್ಥೆಯೇ ಇಲ್ಲ. ತೀವ್ರವಾಗಿ ಹರಡಿರುವ ಕಳ್ಳಿ ಪೊದೆಗಳನ್ನು ತೆರವುಗೊಳಿಸಿಲ್ಲ. ಪರಿಶಿಷ್ಠ ಜಾತಿ ಜನರೇ ವಾಸ ಮಾಡುತ್ತಿರುವ ಕಾಲೊನಿಯನ್ನು ಪಂಚಾಯಿತಿ ಕಡೆಗಣಿಸಿದೆ ಎಂದು ಜನರು ಆರೋಪಿಸುವರು.
‘ಸಮಸ್ಯೆ ಬಗ್ಗೆ ಜನರು ಹೇಳಿಕೊಂಡಿದ್ದರು. ನಾವು ಭೇಟಿ ನೀಡಿ ಪರಿಶೀಲಿಸಿದೆವು. ತಾಲ್ಲೂಕಿನ ಹಲವು ಕಾಲೊನಿಗಳು ಇದೇ ಸ್ಥಿತಿಯಲ್ಲಿವೆ ಇವೆ’ ಎಂದು ದಲಿತ ಸಂಘರ್ಷ ಸಮಿತಿ ಮುಂಖಡ ಲಿಂಗದೇವರು ದೂರುವರು.
‘ಇಲ್ಲಿ ಡೆಂಗಿ, ಮಲೇರಿಯಾ ಉಲ್ಭಣಿಸುತ್ತಿವೆ. ಮಳೆ ಬಂದು ಮನೆಗಳು ಬೀಳುವ ಹಂತದಲ್ಲಿವೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸವಲತ್ತು ಒದಗಿಸಬೇಕು’ ಎಂದು ದಲಿತ ಮುಖಂಡ ಗೋ.ನಿ.ವಸಂತ ಕುಮಾರ್ ಆಗ್ರಹಿಸುವರು.
ಗ್ರಾಮದ ರುದ್ರಣ್ಣ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಭಾಗದವರೇ. ಆದರೂ ಇದುವರೆಗೂ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಲ್ಲ. ಯಾರಿಗೂ ಗಂಗಾಕಲ್ಯಾಣ ಯೋಜನೆ ಭಾಗ್ಯ ದೊರಕಿಲ್ಲ’ ಎಂದರು. ಜೆ.ಸಿ.ಪುರ ಗೋವಿಂದರಾಜು, ಪಿ.ಕೃಷ್ಣಮೂರ್ತಿ ಕಾಲೊನಿಗೆ ಭೇಟಿ ನೀಡಿದ ತಂಡದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.