ADVERTISEMENT

ಪರ್ಯಾಯ ಶಕ್ತಿ ಬೆಂಬಲಿಸಿ: ಡಿವೈಎಫ್‌ಐ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 6:23 IST
Last Updated 21 ಮಾರ್ಚ್ 2014, 6:23 IST

ತುಮಕೂರು: ಕಾಂಗ್ರೆಸ್‌, ಬಿಜೆಪಿ ಪಕ್ಷಗಳಿಗೆ ಯುವಜನರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ­ಮೂರ್ತಿ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ‘ನಾವೆಲ್ಲಾ ಚೆನ್ನಾಗಿ­ರಲು, ಮೂವತ್ತು ನಿಮಿಷ ಮೀಸಲಿಡಿ ಪ್ಲೀಸ್‌’ ಪುಸ್ತಕ ಬಿಡುಗೊಡೆಗೊಳಿಸಿ ಮಾತನಾಡಿ, ಭಾರತ ಗೆಲ್ಲಿಸಿ, ಕೈ ಬಲಗೊಳಿಸಿ ಎನ್ನುತ್ತಿರುವ ಪಕ್ಷ­ಗಳು ನಿರುದ್ಯೋಗಕ್ಕೆ ಕಾರಣವಾಗಿರುವ ಹೊರಗುತ್ತಿಗೆ ಬಗ್ಗೆ ಮಾತನಾಡುವುದಿಲ್ಲವೇಕೆ ಎಂದು ಪ್ರಶ್ನಿಸಿದರು.

ಗುಜರಾತ್‌ನಲ್ಲಿ ಅಭಿವೃದ್ಧಿ ಆಗಿರುವುದು ಕಾರ್ಪೋ­ರೇಟ್‌ ಸಂಸ್ಕೃತಿ. ಶೇ 48ರಷ್ಟು ದಲಿತ, ಹಿಂದು­ಳಿದ ವರ್ಗದ ಮಕ್ಕಳು ಶಾಲೆಯಿಂದ ಹೊರ­ಗುಳಿದಿದ್ದಾರೆ. ಶೇ 42ರಷ್ಟು ಮಹಿಳೆಯರು ರಕ್ತ­ಹೀನತೆ­­ಯಿಂದ ಬಳಲುತ್ತಿದ್ದಾರೆ ಎಂಬುದು ಆರ್‌ಟಿಐ ಮಾಹಿತಿಯಿಂದ ಬಹಿರಂಗಗೊಂಡಿದೆ. ಕಾಂಗ್ರೆಸ್‌ ಪಕ್ಷ ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಹಗರಣಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಡಿವೈಎಫ್‌ಐ ಯುವ ಜನಾಂದೋಲನವನ್ನು ರಾಜ್ಯದಲ್ಲಿ ಆರಂಭಿಸಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗ­ಬೇಕಿದ್ದರೆ, ಪರಮಶಿವಯ್ಯ ವರದಿ ಜಾರಿ­ಯಾಗ­ಬೇಕು. ಕೃಷಿ ಕೈಗಾರಿಕೆಗಳು, ಉತ್ಪಾದನಾ ವಲಯಕ್ಕೆ ಮೀಸಲಾದ ಕೈಗಾರಿಕೆಗಳು ಆರಂಭವಾಗಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್‌.ನಾಗರಾಜು, ಎಂ.ಜಿ.­ಮಂಜು­ನಾಥ್‌ ಇತರರಿದ್ದರು.

ಚುನಾವಣಾ ಕಣಕ್ಕೆ ಸಿಪಿಐ
ತುಮಕೂರು:
ಲೋಕಸಭೆ ಚುನಾವಣೆಯಲ್ಲಿ ಸಿಪಿಐ ಪಕ್ಷದಿಂದ ವಿ.ಚಿನ್ನಪ್ಪ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮುಖಂಡ ಶಿವಣ್ಣ ತಿಳಿಸಿದರು.

ಚಿನ್ನಪ್ಪ ಮಾ. 25ರಂದು ನಾಮಪತ್ರ ಸಲ್ಲಿಸಲಿ­ದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಿಪಿಐ ಪಕ್ಷ ಸ್ಪರ್ಧಿಸದ ಕಡೆ ಜೆಡಿಯು, ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದರು.

ಸಿಪಿಐ ನಿಯೋಜಿತ ಅಭ್ಯರ್ಥಿ ವಿ.ಚಿನ್ನಪ್ಪ ಮಾತನಾಡಿ ಪರಮಶಿವಯ್ಯ ವರದಿ ಜಾರಿ, ತೆಂಗು ಬೆಳೆಗಾರರ ಸಮಸ್ಯೆ ಬಗ್ಗೆ ಹೋರಾಟ ನಡೆಸುವು­ದಾಗಿ ತಿಳಿಸಿದರು. ಸಿಪಿಐ ಜಿಲ್ಲಾ ಕಾರ್ಯ­ದರ್ಶಿ ಕಂಬೇಗೌಡ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್‌.­ರೇವಣ್ಣ, ಗೀರೀಶ್‌, ವಾಸುದೇವಾ ಕುಮಾರ್‌ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT