ADVERTISEMENT

ಪಾದಯಾತ್ರೆ ಹತಾಶೆ ಪ್ರತೀಕ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:05 IST
Last Updated 7 ಜನವರಿ 2012, 10:05 IST

ಪಾವಗಡ: ಕೊರಟಗೆರೆಯಿಂದ-ತುಮಕೂರು ತನಕ ಕಾಂಗ್ರೆಸ್ ನಡೆಸಿದ ಪಾದಯಾತ್ರೆ ಅಧಿಕಾರ ಇಲ್ಲದವರ ಹತಾಶೆಯ ಪ್ರತೀಕ. ಆದ್ದರಿಂದ ಪ್ರತಿಭಟನೆಯಲ್ಲಿ ಮನಸೋಇಚ್ಛೆ ಬಾಯಿಗೆ ಬಂದ ರೀತಿ ಕಾಂಗ್ರೆಸ್ ಮುಖಂಡರು ಮಾತನಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್.ಶಿವಪ್ರಸಾದ್ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ ಪ್ರತಿನಿಧಿಸುವ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಯಾವ ಯೋಜನೆ ನಿಂತು ಹೋಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷರು ಗೌರವಯುತವಾಗಿ ನಡೆದುಕೊಳ್ಳಬೇಕಿತ್ತು. ಅಂಕಿ-ಅಂಶಗಳೊಂದಿಗೆ ಮಾತನಾಡಬೇಕಿತ್ತು. ಬಾಯಿ ಹೋದ ಹಾಗೆ ಹಿರಿಯ ಸಚಿವರನ್ನು `ಶತಮೂರ್ಖ~ ಎಂದು ಜರೆದಿದ್ದು, ಅವರ ವ್ಯಕ್ತಿತ್ವಕ್ಕೆ ತಕ್ಕದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಪದೇ ಪದೇ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಕಾಂಗ್ರೆಸ್ ಪಕ್ಷವೇ ಕಾರಣ. ಕೇಂದ್ರ ಸರ್ಕಾರ ಸಕಾಲಕ್ಕೆ ಕಲ್ಲಿದ್ದಲ್ಲು ಪೂರೈಸದೆ ತಾರತಮ್ಯ ಎಸಗುತ್ತಿದೆ. ಇದನ್ನು ಖಂಡಿಸಿ ಪಾದಯಾತ್ರೆ ನಡೆಸಿದರೆ ನಾವೂ ಸಾಥ್ ನೀಡುತ್ತೇವೆ ಎಂದರು.

ಮಾಜಿ ಶಾಸಕ ಸೋಮ್ಲಾನಾಯ್ಕ , ಮಹಿಳಾ ಮೋರ್ಚಾ ಅಧ್ಯಕ್ಷೆ  ಗಾಯತ್ರಿ ಮಂಜುನಾಥ್, ಕಡಪಲಕೆರೆ ಹನುಮಂತರಾಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್, ಎಂ.ಎಸ್.ವಿಶ್ವನಾಥ್, ರವಿ, ಕೇಶವಚಂದ್ರದಾಸ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.