ADVERTISEMENT

ಪೂಜೆಗೆ ಹೊರಟವರು ಮಸಣ ಸೇರಿದರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 7:35 IST
Last Updated 22 ಜುಲೈ 2012, 7:35 IST

ಗುಬ್ಬಿ: ತಾಲ್ಲೂಕಿನ ಕಳ್ಳಿಪಾಳ್ಯಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ 8.45ರ ಸಮಯದಲ್ಲಿ ಆಟೊ- ಬಸ್ ಮುಖಾಮುಖಿ ಡಿಕ್ಕಿಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೇಗುಲಕ್ಕೆ ತೆರಳುತ್ತಿದ್ದ ದಂಪತಿ ಮೃತಪಟ್ಟಿದ್ದಾರೆ.

ಮೃತರನ್ನು ಪಟ್ಟಣದ ಬಾವಿಹಟ್ಟಿ ವಾಸಿಗಳಾದ ನಟರಾಜ (50) ಮತ್ತು ಆತನ ಪತ್ನಿ ಹನುಮಕ್ಕ (45) ಎಂದು ಗುರುತಿಸಲಾಗಿದೆ.

ಮೊದಲ ಶ್ರಾವಣ ಶನಿವಾರದ ಪ್ರಯುಕ್ತ ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಲು ದಂಪತಿ ಅಜ್ಜಪ್ಪನಹಳ್ಳಿ ದೇಗುಲಕ್ಕೆ ಹೊರಟಿದ್ದರು. ಮೂಕನಹಳ್ಳಿಪಟ್ಟಣ ಗೇಟ್- ಕಳ್ಳಿಪಾಳ್ಯ ನಡುವಣ ಗದ್ದೆ ಬಯಲಿನಲ್ಲಿ ತುಮಕೂರಿನಿಂದ ಹೊಸದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಆಟೊಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಆಟೊ ಸಂಪೂರ್ಣ ನುಜ್ಜುಗುಜ್ಜಾಯಿತು. ಆಟೊ ಓಡಿಸುತ್ತಿದ್ದ ನಟರಾಜ ಮತ್ತು ಹಿಂದೆ ಕುಳಿತಿದ್ದ ಹನುಮಕ್ಕ ಸ್ಥಳದಲ್ಲಿಯೇ ಮೃತಪಟ್ಟರು.

ಅಪಘಾತದಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ಡಿವೈಎಸ್‌ಪಿ ಜಗದೀಶ್, ಸಿಪಿಐ ಎಚ್.ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.