ADVERTISEMENT

ಪ್ರತಿ ಮನೆಗೂ ಶೌಚಾಲಯ-ಗೀತಾ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 8:13 IST
Last Updated 23 ಏಪ್ರಿಲ್ 2013, 8:13 IST

ತುರುವೇಕೆರೆ: ಗ್ರಾಮೀಣ ಪ್ರದೇಶದ ಮಹಿಳೆಯರ ಆರೋಗ್ಯ ಹಾಗೂ ಸುರಕ್ಷತೆಯೇ ತಮ್ಮ ಆದ್ಯತೆಯ ವಿಷಯವಾಗಿದ್ದು, ತಾವು ಗೆದ್ದರೆ ತಾಲ್ಲೂಕಿನ ಪ್ರತಿ ಗ್ರಾಮದ ಮನೆ ಮನೆಯಲ್ಲಿ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಾಯದೊಂದಿಗೆ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ರಾಜಣ್ಣ ಭರವಸೆ ನೀಡಿದರು.

ಸೋಮವಾರ ಪಟ್ಟಣದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಿಳೆಯರು ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿತಿದ್ದಾರೆ. ಸ್ವಾಭಿಮಾನ ಹಾಗೂ ಸ್ವಾವಲಂಬನೆಗಾಗಿ ಗ್ರಾಮೀಣ ಮಹಿಳೆಯರು ತುಡಿಯುತ್ತಿದ್ದಾರೆ. ಆದರೆ ಇಂದಿಗೂ ಅಪೌಷ್ಟಿಕತೆ ಹಾಗೂ ಆರೋಗ್ಯ ಸಮಸ್ಯೆ ಅವರನ್ನು ಕಾಡುತ್ತಿದೆ.

ಬಹಿರ್ದೆಸೆಗೆ ಬಯಲು ಶೌಚಾಲಯ ಅವಲಂಬಿಸಬೇಕಾದ ದುಃಸ್ಥಿತಿ ಇನ್ನೂ ಗ್ರಾಮೀಣ ಪ್ರದೇಶದಲ್ಲಿದೆ. ತಾವು ಶಾಸಕಿಯಾಗಿ ಆಯ್ಕೆಯಾದರೆ ಮಹಿಳೆಯ ಜೀವನ ಭದ್ರತೆ ಹಾಗೂ ಸುರಕ್ಷತೆಗೆ ಶ್ರಮಿಸುವೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮಹಿಳೆಯರನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಮಾಡುವೆ. ಈ ಪ್ರಯತ್ನಕ್ಕೆ ತಾಲ್ಲೂಕಿನ ಮಹಿಳೆಯರು ಸಕಾರಾತ್ಮಕವಾಗತಿ ಸ್ಪಂದಿಸುತ್ತಿದ್ದಾರೆ ಎಂದರು.

ಮಾಯಸಂದ್ರದ ಚಂದ್ರಶೇಖರ್ ಸಂಗಡಿಗರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಮಾಜಿ ಶಾಸಕ ಎಸ್.ರುದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜ್, ಜಿ.ಪಂ.ಸದಸ್ಯ ಉಗ್ರಯ್ಯ, ಮಾಜಿ ಸದಸ್ಯ ಹನುಮಂತಯ್ಯ, ಬಿ.ಎಸ್.ವಸಂತಕುಮಾರ್, ರಾಜಣ್ಣ, ಉಗ್ರಪ್ಪ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.