ADVERTISEMENT

ಬಾಬಾ ಪಾದುಕೆ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 9:23 IST
Last Updated 14 ಮಾರ್ಚ್ 2018, 9:23 IST
ವಿದ್ಯುತ್‌ ದೀಪಾಲಂಕಾರಗಳಿಂದ ಅಲಂಕಾರಗೊಂಡಿದ್ದ ರಾಮಕೃಷ್ಣ ನಗರದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ
ವಿದ್ಯುತ್‌ ದೀಪಾಲಂಕಾರಗಳಿಂದ ಅಲಂಕಾರಗೊಂಡಿದ್ದ ರಾಮಕೃಷ್ಣ ನಗರದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ   

ತುಮಕೂರು: ನಗರದ ರಾಮಕೃಷ್ಣ ನಗರದಲ್ಲಿರುವ ಶಿರಡಿ ಸಾಯಿನಾಥ  ದೇವಸ್ಥಾನದಲ್ಲಿ ಶಿರಡಿ ಸಾಯಿಬಾಬಾ ಪಾದುಕೆ ದರ್ಶನ ಮಹೋತ್ಸವ ಮಂಗಳವಾರ ನಡೆಯಿತು.

ಸಾವಿರಾರು ಭಕ್ತರು ದರ್ಶನ ಪಡೆದರು. ನಗರ ಮತ್ತು ಜಿಲ್ಲೆಯ ವಿವಿಧ ಕಡೆಗಳಿಂದ ಭಕ್ತರು ಬಂದಿದ್ದರು. ಎಲ್ಲರಿಗೂ ಪಾದುಕೆ ಇಟ್ಟಿದ್ದ ಪೆಟ್ಟಿಗೆಯನ್ನು ಮುಟ್ಟಿ ನಮಸ್ಕರಿಸಲು ಅವಕಾಶ ಕಲ್ಪಿಸಲಾಗಿತ್ತು. 

ಶಿರಡಿ ಸಾಯಿಬಾಬಾ ಪರಿನಿರ್ವಾಣ ಹೊಂದಿ 100 ವರ್ಷಗಳಾದ ಸವಿನೆನಪಿಗಾಗಿ ಶಿರಡಿಯಿಂದ ಬಾಬಾ ಅವರ ಪಾದುಕೆಗಳನ್ನು ರಾಜ್ಯದಲ್ಲಿ ‍ಪ್ರಥಮ ಬಾರಿಗೆ ಆಹ್ವಾನಿಸಿ ಭಕ್ತರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಯಿ ಮಂದಿರವನ್ನು ವಿದ್ಯುತ್‌ ದೀಪಾಲಂಕಾರಗಳಿಂದ ಅಲಂಕರಿಸಲಾ
ಗಿತ್ತು. ವಿವಿಧ ಧಾರ್ಮಿಕ ಕಾರ್ಯಗಳು ಮತ್ತು ಭಜನಾ ಕಾರ್ಯಕ್ರಮಗಳು ನಡೆದವು. ಶಿರಡಿ ಸಾಯಿಬಾಬಾ ಮಂದಿರದಿಂದಲೇ ಅನೇಕ ಸಿಬ್ಬಂದಿ  ಬಂದಿದ್ದರು.

ADVERTISEMENT

ಬೆಳಿಗ್ಗೆಯಿಂದ ನೂರಾರು ಸಂಖ್ಯೆಯಲ್ಲಿ ಬಂದ ಭಕ್ತರು ಸರತಿಯಲ್ಲಿ ನಿಂತು ದರ್ಶನ ಪಡೆದರು. ರಾತ್ರಿ 10 ಗಂಟೆಯಾದರೂ ಭಕ್ತರು ಬರುತ್ತಿದ್ದರು. ಭಕ್ತರಿಗೆಲ್ಲ ಅನ್ನ ದಾಸೋಹ ನಡೆಯಿತು.

ಬಹಳ ಅನುಕೂಲ: ಎಲ್ಲರಿಗೂ ಶಿರಡಿಗೆ ಹೋಗಿ ಬಾಬಾ ದರ್ಶನ ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ನಗರದಲ್ಲಿಯೇ ಬಾಬಾ ಪಾದುಕೆಯನ್ನು ಆಹ್ವಾನಿಸಿ ಭಕ್ತರ ದರ್ಶನಕ್ಕೆ ಇಟ್ಟಿರುವುದರಿಂದ ಭಕ್ತರಿಗೆ ಬಹಳ ಅನುಕೂಲವಾಗಿದೆ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಶಿರಡಿ ಸಾಯಿನಾಥ ಸೇವಾ ಸಮಿತಿಯು ಸಂಜೆ ಆಯೋಜಿಸಿದ್ದ 6ನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಯಿಬಾಬಾ ತಮ್ಮ ಜೀವನದಲ್ಲಿ ಬಡವರಿಗೆ ಮತ್ತು ನೊಂದವರಿಗೆ ಬಹಳಷ್ಟು ಸೇವೆ ಮಾಡಿದ್ದಾರೆ. ತಮ್ಮ ಸಂತ ಜೀವನದಿಂದಲೇ ರಾಷ್ಟ್ರದಾದ್ಯಂತ ಕೋಟ್ಯಂತರ ಭಕ್ತರನ್ನು ಸಂಪಾದಿಸಿದ್ದರು ಎಂದು ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ‘ಸಾಯಿಬಾಬಾ ಅವರ ಪಾದುಕೆಯ ಸಾಯಿಬಾಬಾ ಅವರ ಸಾಕ್ಷಿಯಾಗಿರುವುದರಿಂದ ಭಕ್ತರು ಪಾದುಕೆಯ ದರ್ಶನ ಪಡೆದು ಸಾಕ್ಷಾತ್‌ ಬಾಬಾ ಅವರನ್ನು ಕಣ್ತುಂಬಿಕೊಳ್ಳಬೇಕು’ ಎಂದರು. ಶಿರಡಿ ಸಾಯಿನಾಥ ಸೇವಾ ಸಮಿತಿ ಅಧ್ಯಕ್ಷ ಜಿ.ಎಸ್‌.ಬಸವರಾಜು, ಕಾರ್ಯದರ್ಶಿ ಗುರುಸಿದ್ದಪ್ಪ, ಸಾಹಿತಿ ಕವಿತಾ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.