ಚಿಕ್ಕನಾಯಕನಹಳ್ಳಿ: ಬಿ.ಎಸ್.ಯಡಿಯೂರಪ್ಪ ಏಕಾಏಕಿ ಬಿಜೆಪಿ ಜತೆ ಬೆಸೆದುಕೊಳ್ಳುವ ಮೂಲಕ ಅವರ ಬೆಂಬಲಿಗರಿಗೆ ಮೋಸ ಮಾಡಿದ್ದಾರೆ. ಆದರೆ ನಾನು ನನ್ನ ಬೆಂಬಲಿಗರಿಗೆ ಮೋಸ ಮಾಡಲಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ನವೋದಯ ಪದವಿ ಕಾಲೇಜ್ನಲ್ಲಿ ಶನಿವಾರ ನಡೆದ ಬೆಂಬಲಿಗರ ಸಭೆ ಬಳಿಕ ಪತ್ರಕರ್ತರ ಜತೆ ಮಾತನಾಡಿ ತಾವು ಕಾಂಗ್ರೆಸ್ ಸೇರುವ ವಿಚಾರವಾಗಿ ಕಾರ್ಯಕರ್ತರಲ್ಲಿ ಒಮ್ಮತ ಮೂಡಲಿಲ್ಲ. ಬಿಜೆಪಿ ಅಥವಾ ಜಿ.ಎಸ್.ಬಸವರಾಜು ಈವರೆಗೆ ನನ್ನ ಬೆಂಬಲ ಕೋರಿಲ್ಲ. ಹಾಗಾಗಿ ಬಿಜೆಪಿ ಸೇರುವ ಯಾವುದೇ ಆಲೋಚನೆ ಇಲ್ಲ.
ಕಾಂಗ್ರೆಸ್ನಿಂದ ಆಹ್ವಾನವಿದ್ದರೂ ಕಾರ್ಯಕರ್ತರ ನಡುವೆ ಒಮ್ಮತ ಮೂಡುವವರೆಗೂ ನಾನು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು.
ಸಭೆ ಏಕಾಏಕಿ ನಿರ್ಧಾರವಾಗಿದ್ದು ಹಲ ನಿಷ್ಠಾವಂತ ಕಾರ್ಯಕರ್ತರಿಗೆ ಮಾಹಿತಿ ತಲುಪಿಲ್ಲ. ಆ ಕಾರಣದಿಂದ ಮತ್ತೊಮ್ಮೆ ಸಭೆ ಕರೆದು ತೀರ್ಮಾನಿಸಲಾಗುವುದು. ಸದ್ಯದಲ್ಲೇ ಮುಂದಿನ ಸಭೆ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಸಿಂಗದಹಳ್ಳಿ ರಾಜ್ಕುಮಾರ್, ತಿಮ್ಲಾಪುರ ಶಂಕರಣ್ಣ, ಎಪಿಎಂಸಿ ಅಧ್ಯಕ್ಷ ಶಿವರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಆರ್.ಶಶಿಧರ್, ವೈ.ಆರ್.ಮಲ್ಲಿಕಾರ್ಜುನಯ್ಯ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.