ADVERTISEMENT

ಮಂಜೂರಾದ 423 ಮನೆಗಳು ರದ್ದು

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 5:25 IST
Last Updated 5 ಜುಲೈ 2012, 5:25 IST

ಗೌರಿಬಿದನೂರು: ಬಸವ, ಇಂದಿರಾ, ಆಶ್ರಯ ವಸತಿ ಯೋಜನೆಯಡಿ 2010-11ರ ಸಾಲಿನಲ್ಲಿ ತಾಲ್ಲೂಕಿಗೆ  ಮಂಜೂರಾದ ಎರಡು ಸಾವಿರ ಮನೆಗಳಲ್ಲಿ  423 ಮನೆಗಳು ರದ್ದಾಗಿವೆ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿ  ಪ್ರಶಾಂತ್ ಬುಧವಾರ ನಡೆದ ಸಭೆಯಲ್ಲಿ ಗಮನಕ್ಕೆ ತಂದರು.

 ಮನೆಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕವಾಗಿ ಸದೃಢರಾಗದಿರುವುದರಿಂದ ಫಲಾನುಭವಿಗಳ ಮನೆಗಳು  ರದ್ದಾಗಿವೆ. ಸ್ಥಗಿತಗೊಂಡಿರುವ ಮನೆಗಳ ಪಟ್ಟಿಯನ್ನು ಮತ್ತೆ ನೀಡಲು ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

 ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನೆ ವರದಿಗಳನ್ನು ಒಪ್ಪಿಸಿದಾಗ  ಸಮಾಧಾನಗೊಳ್ಳದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿಗಳಲ್ಲಿ  ಪಿಡಿಓ ಮತ್ತು ಕಾರ್ಯದರ್ಶಿಗಳು ಗ್ರಾಮಗಳ ಮೂಲ ಸೌಲಭ್ಯಗಳಿಗೆ  ಹೆಚ್ಚಿನ ಆದ್ಯತೆ  ನೀಡದೆ ಕಾಟಾಚಾರಕ್ಕೆ  ಗ್ರಾಮ ಸಭೆಗಳನ್ನು ನಡೆಸುತ್ತಾರೆ ಎಂದು ಹೇಳಿದರು.

 2010-11ನೇ ಸಾಲಿನಲ್ಲಿ ಅಂಬೇಡ್ಕರ್ ವಸತಿ ಯೋಜನೆಯಡಿ 30 ಮನೆಗಳು ಮುಂಜೂರಾಗಿವೆ.
 ಇವುಗಳನ್ನು ತಾಲ್ಲೂಕಿನ ಜೀತ ಮುಕ್ತರಿಗೆ ನೀಡಬೇಕು ಎಂದು ಸದಸ್ಯರು ಹೇಳಿದರು.
 ಜಲಾನಯನ ಇಲಾಖೆಯಿಂದ ರಚಿಸಿಕೊಂಡಿರುವ ಸಂಘದ ಮಹಿಳೆಯರಿಗೆ ಉದ್ಯೋಗ ಪಡೆಯಲು ತಲಾ 5ರಿಂದ 10 ಸಾವಿರ  ರೂಪಾಯಿ ಸಾಲ ಸೌಲಭ್ಯ ನೀಡಲಾಗಿದೆ ಎಂದು  ಜಲಾನಯನ ಇಲಾಖೆ ಅಧಿಕಾರಿಗಳು ತಿಳಿಸಿದರು.

 ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ         ಅಧ್ಯಕ್ಷತೆ ವಹಿಸಿದ್ದರು.
 ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವ್ಯಾಸರಾಜ್, ವ್ಯವಸ್ಥಾಪಕ ವೆಂಕಟರವಣಪ್ಪ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.