ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 9:25 IST
Last Updated 28 ಜನವರಿ 2012, 9:25 IST

ತುಮಕೂರು: ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸದೆ ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುರೇಶ್‌ಬಾಬು ಸಲಹೆ ಮಾಡಿದರು.

ತಾಲ್ಲೂಕಿನ ಬೆಳಧರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಈಚೆಗೆ ನಡೆದ ಪೋಷಕರ ಮೇಳ ಮತ್ತು ಮಕ್ಕಳ ಹಕ್ಕು ರಕ್ಷಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಶಾಲೆಗಳಲ್ಲಿ ಮಕ್ಕಳಿಗೆ ವಿನಾಕಾರಣ ಮಾನಸಿಕ ತೊಂದರೆ ಕೊಡುವುದು, ಮಕ್ಕಳಲ್ಲಿ ಭೇದಭಾವ ಮೂಡಿಸುವುದು, ಕೀಳರಿಮೆ ಉಂಟುಮಾಡುವುದು, ಮಕ್ಕಳನ್ನು ಹಿಂಸಿಸುವುದು, ಕ್ರೀಡಾ ಚಟುವಟಿಕೆ, ಪಾಠಪ್ರವಚನಗಳಲ್ಲಿ ತಾರತಮ್ಯ ಮಾಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಎನಿಸಿಕೊಳ್ಳುತ್ತದೆ ಎಂದು ವಿವರಿಸಿದರು.

ಮುಖ್ಯ ಶಿಕ್ಷಕಿ ಎಚ್.ಡಿ.ನಾಗರತ್ನಮ್ಮ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಶಿಕ್ಷಕರು, ಪೋಷಕರು ಹೆಚ್ಚು ಒತ್ತು ನೀಡಬೇಕು. ಮಕ್ಕಳ ಹಕ್ಕು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದು ನುಡಿದರು.

ಎಸ್‌ಡಿಎಂಸಿ ಅಧ್ಯಕ್ಷೆ ದಾಕ್ಷಾಯಣಮ್ಮ, ದೈಹಿಕ ಶಿಕ್ಷಕ ಕೇಶವಮೂರ್ತಿ, ಶಿಕ್ಷಕಿಯರಾದ ಚಂದ್ರಮ್ಮ, ಜಯಮ್ಮ ಉಪಸ್ಥಿತರಿದ್ದರು.
 
ದಸೂಡಿ ಉಪಸ್ಥಾವರ ಚಾಲನೆ ಶೀಘ್ರ
ತುಮಕೂರು:
ದಸೂಡಿ ಉಪ ಸ್ಥಾವರ ಮತ್ತು ಮಾರ್ಗದ ಕಾಮಗಾರಿ ಮುಕ್ತಾಯದ ಹಂತ ತಲುಪಿರುವ ಹಿನ್ನೆಲೆಯಲ್ಲಿ ಶೀಘ್ರ ಉಪ ಸ್ಥಾವರ ಚಾಲನೆಗೊಳಿಸಲು ನಿರ್ಧರಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಜ. 10ರಂದು ಉಪಸ್ಥಾವರ, ಮಾರ್ಗದ ಚಾಲನೆಗೆ ಭರವಸೆ ನೀಡಲಾಗಿತ್ತು. ಆದರೆ ಪ್ರಸರಣ ಮಾರ್ಗದ ಕಾಮಗಾರಿಯಲ್ಲಿ ರೈತರ ಪ್ರತಿಭಟನೆಯಿಂದ ಕಾಮಗಾರಿ ವಿಳಂಬವಾಯಿತು ಎಂದು ಹೇಳಿದ್ದಾರೆ.

ಉಚಿತ ವೈದ್ಯಕೀಯ ತಪಾಸಣೆ ಶಿಬಿರ
ತುಮಕೂರು:
ಗಂಗಾಧರೇಶ್ವರ ಮಾಸ್ ಎಜುಕೇಷನ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಗಂಗನಾಲ ಗ್ರಾಮದಲ್ಲಿ ಜ. 29ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅಧಿಕಾರ ಸ್ವೀಕಾರ
ತುಮಕೂರು:
ಡಾ.ಬಿ.ಎನ್.ರವಿ ರಾಜೀನಾಮೆಯಿಂದ ತೆರವಾಗಿದ್ದ ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಲಲಿತಮ್ಮ ಮಂಜುನಾಥ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.