ತೋವಿನಕೆರೆ: ಮಳೆ ಇಲ್ಲದೇ ಕಂಗಲಾಗಿದ್ದ ರೈತರಿಗೆ ಈಗ ಮಳೆ ಬಂದು ಬೆಳೆ ಬಂದರೂ ಕೀಟ ಬಾಧೆ ಕಾರಣ ಬೆಳೆ ಉಳಿಸಿಕೊಳ್ಳಲು ಹರಸಾಸಹ ಪಡುವಂತಾಗಿದೆ. ಕೈಗೆ ಸಿಕ್ಕಿರುವ ಬೆಳೆ ಬಾಯಿಗೆ ಬಾರದಂತಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕ ಹಾಗೂ ತೀವ್ರಗತಿಯಲ್ಲಿ ಕೀಟಗಳು ಹರಡುತ್ತಿದ್ದು, ರಾಗಿ, ಜೋಳದ ಎಲೆಗಳನ್ನು ಸಂಪೂರ್ಣ ತಿಂದು ಹಾಕುತ್ತಿವೆ. ಹುಳುಗಳ ನಿಯಂತ್ರಣ ರೈತರಿಗೆ ಸಾಧ್ಯವಾಗುತ್ತಿಲ್ಲ.
ನೂರಾರು ಎಕರೆ ಜಮೀನುಗಳಲ್ಲಿ ರಾಗಿ, ಜೋಳ ಮತ್ತು ತೋಗರಿಗಳನ್ನು ಬಿತ್ತನೆ ಮಾಡಲಾಗುತ್ತದೆ. ಈ ಬಾರಿ ಮೊದಲ ಹಂತದಲ್ಲಿ ಬಿತ್ತನೆ ಮಾಡಿದ ರಾಗಿ ಕಟ್ಟಾವಿಗೆ ಬಂದ್ದಿದು ಅಧಿಕ ಮಳೆಗೆ ಅಲ್ಲಲಿ ತೆನೆಯಲ್ಲಿ ಮೊಳಕೆಗಳು ಕಂಡು ಬಂದಿದೆ. ಎರಡು, ಮೂರನೇ ಹಂತದಲ್ಲಿ ಬಿತ್ತನೆ ಮಾಡಿರುವ ರಾಗಿ ಜೋಳ, ತೊಗರಿಗೆ ವಿವಿಧ ಕೀಟಗಳ ದಾಳಿಗೊಳಗಾಗಿದ್ದು, ರೈತರಿಗೆ ನೆಮ್ಮದ್ದಿ ಇಲ್ಲದಂತಾಗಿದೆ.
ಕೆಂಪು, ಕಪ್ಪು, ಹಸಿರು ಮತ್ತು ಬಿಳಿ ಬಣ್ಣದ ಕೀಟಗಳು ದಾಳಿಯಿಟ್ಟಿದ್ದು, ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಕೆಲವು ಕಡೆಗಳಲ್ಲಿ ತೊಗರಿ ಬೆಳೆಯಲ್ಲೂ ಕೀಟಗಳು ಕಂಡು ಬಂದಿವೆ.
ಕೀಟಗಳ ಹಾವಳಿಯನ್ನು ತಡೆಯಲು ವಿಜ್ಞಾನಿಗಳ ಸಲಹೆಯಂತೆ ಕ್ರಿಮಿನಾಶಕ ಸಿಂಪರಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದ ಕೀಟಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.