ಶಿರಾ: ನಗರದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಸಾಹಿತ್ಯ ಭವನ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಅರೇಹಳ್ಳಿ ರಮೇಶ್ ಸೋಮವಾರ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೊಳವೆಬಾವಿ ಕೊರೆಸಿಕೊಡುವ ಭರವಸೆ ನೀಡಿದರು.
33 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭವನ ನಗರಕ್ಕೆ ಒಂದು ಮಾದರಿಯಾಗಬೇಕು, ಕಳಪೆ ಕಾಮಗಾರಿ ಇಲ್ಲದೆ ಸುಂದರ ಕಟ್ಟಡ ನಿರ್ಮಿಸಬೇಕೆಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ನಿರ್ಮಿತಿ ಕೇಂದ್ರದ ಎಂಜಿನಿಯರ್ ಪುಟ್ಟಲಿಂಗಪ್ಪ, ಎಂಜಿನಿಯರ್ ಆರ್.ಜಯರಾಮಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ, ಗೌರವ ಕಾರ್ಯದರ್ಶಿ ಸುರೇಶ್ವತ್ಸ ಮತ್ತಿತರು ಇದ್ದರು.
ನಾಮಫಲಕ ಕೊಡುಗೆ
ಗುಬ್ಬಿ: ರಸ್ತೆ ಸಂಚಾರ ನಿಯಮದ ಅರಿವು ಮೂಡಿಸುವ ನಿಟ್ಟಿನಲ್ಲಿ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು ಸಂಚಾರ ನಿಯಮಾವಳಿ ಚಿಹ್ನೆಯ ನಾಮಫಲಕವನ್ನು ಪೊಲೀಸ್ ಇಲಾಖೆಗೆ ಈಚೆಗೆ ಕೊಡುಗೆಯಾಗಿ ನೀಡಿದರು.
ಪಟ್ಟಣದ ಲಯನ್ ಸಂಸ್ಥೆ, ರೋಟರಿ ಕ್ಲಬ್, ವರ್ತಕರ ಸಂಘ ಸೇರಿದಂತೆ ವಿವಿಧ ಶಾಲೆಯ ವ್ಯವಸ್ಥಾಪಕರು ರಸ್ತೆ ತಿರುವು, ಸೇತುವೆ, ರಸ್ತೆ ಉಬ್ಬು, ಕಿರಿದಾದ ರಸ್ತೆ, ಜನ ಜಂಗುಳಿ ಹಾಗೂ ಶಾಲಾ ವ್ಯಾಪ್ತಿ ಸೂಚಿಸುವ ಸಂಚಾರಿ ನಿಯಮ ಹಾಗೂ ಚಿಹ್ನೆ ಬರೆದ 50 ನಾಮಫಲಕವನ್ನು ಗುಬ್ಬಿ ಠಾಣೆಗೆ ನೀಡಿದರು.
ಡಿವೈಎಸ್ಪಿ ಜಗದೀಶ್ ಮಾತನಾಡಿ, ಗುಬ್ಬಿ ಠಾಣಾ ವ್ಯಾಪ್ತಿಗೆ 40 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ವರ್ಷಕ್ಕೆ 250 ಅಫಘಾತ ಪ್ರಕರಣ ದಾಖಲಾಗುತ್ತಿದ್ದು, ಸುಮಾರು 50ರಷ್ಟು ಸಾವಿನ ಘಟನೆ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ವಾಹನ ಸವಾರರಿಗೆ ರಸ್ತೆ ನಿಯಮದ ತಿಳುವಳಿಕೆ ನೀಡುವುದು ಅಗತ್ಯವಿದೆ ಎಂದರು.
ವೃತ್ತ ನಿರೀಕ್ಷಕ ಎಚ್.ಶ್ರೀನಿವಾಸ್ ಮಾತನಾಡಿದರು. ಈ ಸಂದರ್ಭದಲ್ಲಿ ತೀವ್ರ ವಾಹನ ದಟ್ಟಣೆಯ ಸರ್ಕಲ್ ಮತ್ತು ಬಸ್ ನಿಲ್ದಾಣದ ಬಳಿ ಸಿಗ್ನಲ್ ಅಳವಡಿಕೆ ಬಗ್ಗೆ ಚರ್ಚಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.