ADVERTISEMENT

ಮುಂಗಾರು: ಮುನ್ನೆಚ್ಚರಿಕೆ ವಹಿಸದ ನಗರಸಭೆ

ನಗರ ಸಂಚಾರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 9:32 IST
Last Updated 1 ಜುಲೈ 2013, 9:32 IST

ತುಮಕೂರು: ಮುಂಗಾರು ಆರಂಭಗೊಂಡು ತಿಂಗಳು ಮುಗಿದಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದ್ದ ನಗರಸಭೆ ಆಡಳಿತ ಕಣ್ಮುಚ್ಚಿ ಕೂತಿರುವುದರಿಂದ ನಗರದ ಜನ ನಾನಾ ಸಂಕಷ್ಟ ಎದುರಿಸುತ್ತಿದ್ದಾರೆ. ಪರಿಸ್ಥಿತಿ ಕೈಮೀರುವ ಹಂತ ತಲುಪಿದ್ದು, ಕೆಲವೆಡೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ.

ತುಮಕೂರು-ಹೊನ್ನಾವರ (206) ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕುಣಿಗಲ್ ಬೈಪಾಸ್ ರಸ್ತೆ ಸೇರುವ ಸಮೀಪ ಪರಿಸ್ಥಿತಿ ಬಿಗಡಾಯಿಸಿದೆ. ಇಲ್ಲಿ ಬಹುತೇಕ ಗ್ಯಾರೇಜ್‌ಗಳೇ ಕಾರ್ಯ ನಿರ್ವಹಿಸುತ್ತಿವೆ. ರಸ್ತೆ ಬದಿ ಚರಂಡಿ ನಿರ್ಮಿಸಿಲ್ಲ. ಮಳೆ ಸುರಿದರೆ ರಸ್ತೆ ಸನಿಹದ ಗುಂಡಿಗಳಲ್ಲೇ ನೀರು ನಿಲ್ಲುತ್ತದೆ. ಕನಿಷ್ಠ ಎರಡ್ಮೂರು ದಿನ ನೀರು ನಿಂತು ಸಮಸ್ಯೆ ಸೃಷ್ಟಿಸುತ್ತಿದೆ.

ಕಳೆದ ಗುರುವಾರ ಸಂಜೆ ಮಳೆ ಸುರಿಯಿತು. ಅಂದಿನಿಂದಲೂ ನೀರು ನಿಂತಿದೆ. ಈ ನೀರಿನೊಳಗೆ ಲಾರಿಗಳನ್ನು ನಿಲ್ಲಿಸಿಕೊಂಡು ಕೆಲಸ ಮಾಡಬೇಕು. ಬಹುತೇಕ ಸಮಯ ಲಾರಿಗಳ ಕೆಳಗೆ ಮಲಗಿ ಕೆಲಸ ಮಾಡಬೇಕು. ಗ್ಯಾರೇಜ್ ಮುಂಭಾಗ ನೀರು ನಿಂತು ಕೆಸರುಮಯವಾಗಿರುತ್ತದೆ. ಕೆಲಸ ಬಿಡುವಂಗೂ ಇಲ್ಲ. ಕೆಸರಿನೊಳಗೆ ಒದ್ದಾಡಬೇಕು. ರಸ್ತೆ ಬದಿ ಚರಂಡಿ ನಿರ್ಮಿಸಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇದ್ದಿದ್ದರೇ ಈ ಸಮಸ್ಯೆ ಇರುತ್ತಿರಲಿಲ್ಲ.

ಚರಂಡಿ ನಿರ್ಮಿಸುವಂತೆ ಎಲ್ಲರ ಬಳಿಯೂ ಮನವಿ ಸಲ್ಲಿಸಿಯಾಗಿದೆ. ಚಿಕ್ಕಾಸಿನ ಉಪಯೋಗವಿಲ್ಲ. ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ. ಬೇರೆ ಮಾರ್ಗ ಕಾಣದೆ ಬಾಯ್ಮುಚ್ಚಿಕೊಂಡು ಕೆಲಸ ಮಾಡುತ್ತಿದ್ದೇವೆ. ಗುರುವಾರ ಸಂಜೆ ಸುರಿದ ಮಳೆಗೆ ಈಗಲೂ ಇಲ್ಲಿ ಕೆಸರುಮಯ. ನಮ್ಮ ಸಮಸ್ಯೆ ಕೇಳುವರು ಯಾರು ಎಂಬ ಪ್ರಶ್ನೆ ಕುಣಿಗಲ್ ರಸ್ತೆಯ ಬಷೀರ್ ಅವರದ್ದು.

ರಸ್ತೆ ಬದಿ ಚರಂಡಿ ಇದೆ. ಮುಂಗಾರಿಗೂ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ತುಂಬಿದ್ದ ಹೂಳು ಎತ್ತಲಾಗಿದೆ. ಚರಂಡಿಯಿಂದ ಎತ್ತಿದ ಹೂಳನ್ನು ಪಕ್ಕದಲ್ಲೇ ಬಿಡಲಾಗಿದೆ. ಅದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡದಿರುವುದರಿಂದ ಮಳೆ ನೀರಿನೊಟ್ಟಿಗೆ ಹೂಳೆಲ್ಲಾ ಮತ್ತೆ ಚರಂಡಿ ಪಾಲಾಗುತ್ತಿದೆ. ಎಂದಿನಂತೆ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿವೆ. ಇದರ ಜತೆ ಸೊಳ್ಳೆಗಳ ಸಂತಾನೋತ್ಪತಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಈ ಭಾಗದಲ್ಲಿ ಚರಂಡಿ ವಾಸನೆ ಸಹಿಸಲು ಅಸಾಧ್ಯ. ಇದರ ಜತೆ ಸೊಳ್ಳೆ ಕಾಟ ವಿಪರೀತ. ಅನಾರೋಗ್ಯ ಭೀತಿಯಲ್ಲೇ ದಿನ ತಳ್ಳುವಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಗರಸಭೆ ಆಡಳಿತಕ್ಕೆ ಚರಂಡಿ ಹೂಳೆತ್ತುವುದು ಲಾಭದಾಯಕ ಎನಿಸಿರುವ ಆಗಿದೆ ಎಂಬ ಅಸಮಾಧಾನ ದಿಬ್ಬೂರು ರಿಂಗ್ ರೋಡ್‌ನ ಆಸುಪಾಸಿನ ನಿವಾಸಿಗಳದ್ದು. ಇದು ಬರೀ ಈ ರಸ್ತೆಗೆ ಸೀಮಿತ ಎನಿಸಿಲ್ಲ. ನಗರದ ಬಹುತೇಕ ಚರಂಡಿಗಳು ಕಟ್ಟಿಕೊಂಡಿವೆ. ಮಳೆ ನೀರು ಸರಾಗವಾಗಿ ಹರಿಯುವ ಸ್ಥಿತಿಯಲ್ಲಿ ಬಹುತೇಕ ಚರಂಡಿಗಳು ಇಲ್ಲ.

ಇನ್ನೂ ರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ. ಕೋಟಿ ಕೋಟಿ ಅನುದಾನ ಬಂದರೂ ತುಮಕೂರು ನಗರದ ರಸ್ತೆಗಳಿಗೆ ಹೊಸ ಆಯಾಮ ಸಿಕ್ಕಿಲ್ಲ. ಕುಣಿಗಲ್ ರಸ್ತೆಯಲ್ಲಿ ರೈಲ್ವೆ ಮೇಲ್ಸೆತುವೆ ಹಾದು ಹೋಗುವ ಸ್ಥಳದ ರಸ್ತೆ ಮತ್ತೆ ಹಾಳಾಗಿದೆ. ಕಳಪೆ ಕಾಮಗಾರಿಯಿಂದ ಸಮಸ್ಯೆ ಪದೇ ಪದೇ ಸೃಷ್ಟಿಯಾಗುತ್ತಿದೆ. ರಾತ್ರಿ ವೇಳೆ ಇರಲಿ ಹಗಲಲ್ಲೇ ಈ ಭಾಗದಲ್ಲಿ ಸಂಚರಿಸಲು ಹರಸಾಹಸ ಪಡಬೇಕು ಎಂಬಂಥ ಸ್ಥಿತಿ ಇದೆ. ಇದರ ಜತೆಗೆ ರಸ್ತೆ ಪಕ್ಕದ ಚರಂಡಿ ಕಿತ್ತಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ವಾಹನ ಸವಾರರು ಹಿಡಿಶಾಪ ಹಾಕಿಕೊಂಡೇ ಪ್ರಯಾಣ ಮುಂದುವರೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲಿ ಬಿದ್ದು ಪೆಟ್ಟು ತಿಂದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಇದರ ಜತೆ ಬಟವಾಡಿಯಿಂದ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹಾಳಾಗಿದೆ. ಮಳೆ ಬಿದ್ದರೆ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬುದು ತೋಚದಾಗಿದೆ. ಬಿಸಿಲು ಕಾದರೆ ದೂಳಿನ ಅಭಿಷೇಕ. ಮಳೆ ಬಿದ್ದರೆ ಕೆಸರಿನ ಅಭಿಷೇಕ ಎಂಬಂಥ ಸ್ಥಿತಿ ಈ ರಸ್ತೆಯಲ್ಲಿ ಸಂಚರಿಸುವ ನಾಗರಿಕರದ್ದು. ನಗರಸಭೆ ಚುನಾವಣೆ ಘೋಷಣೆಯಾಗುವ ಕೆಲ ದಿನ ಮುಂಚೆ ರಸ್ತೆ ದುರಸ್ತಿಗೆ ಚಾಲನೆ ಸಿಕ್ಕಿತ್ತು ಅಷ್ಟೇ. ಕಾಮಗಾರಿ ನಡೆದಿದ್ದು ಒಂದೇ ದಿನ. ಸಮಸ್ಯೆ ಮಾತ್ರ ಅನುದಿನವೂ ಇದೆ. ನಿತ್ಯ ನಮ್ಮ ಗೋಳು ಕೇಳುವರು ಯಾರು ಎನ್ನುತ್ತಾರೆ ಮೊಬೈಲ್ ಅಂಗಡಿಯೊಂದರ ಮಾಲೀಕರು.

ಕಸ ವಿಲೇವಾರಿ ತುಮಕೂರು ಮಟ್ಟಿಗೆ ಬಗೆಹರಿಯದ ಸಮಸ್ಯೆ ಆಗಿದೆ. ದಿನ ಉರುಳಿದಂತೆ ಸಮಸ್ಯೆ ಬಿಗಡಾಯಿಸುತ್ತಿದೆ. ಮಳೆ ಬಿದ್ದರಂತೂ ಅಸಹನೀಯ. ಈಗಲೂ ನಗರದ ಬಹುತೇಕ ಕಡೆ ಕಸ ವ್ಯವಸ್ಥಿತವಾಗಿ ವಿಲೇವಾರಿಯಾಗುತ್ತಿಲ್ಲ ಎಂಬ ಆರೋಪ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ರಸ್ತೆ ಬದಿ, ಬೀದಿ ಮಧ್ಯೆ ಕಸದ ರಾಶಿ ರಾರಾಜಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.