ಪಟ್ಟನಾಯಕನಹಳ್ಳಿ: ‘ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿಗೆ ಸಂಬಂಧಿಸಿದಂತೆ ವಿಧೇಯಕ ಮಂಡನೆಯಿಂದ ಪರಿಶಿಷ್ಟರಿಗೆ ಅನುಕೂಲವಾಗಲಿದೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ದೊಡ್ಡ ಹುಲಿಕುಂಟೆ ಗ್ರಾಮದಲ್ಲಿ ಭಾನುವಾರ ಸಿದ್ದಾರ್ಥ ಪರಿಶಿಷ್ಟ ಜಾತಿ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ‘ಮೌಢ್ಯ ನಿಷೇಧ ಕಾಯ್ದೆ, ಪರಿಶಿಷ್ಟ ಜಾತಿ, ಪಂಗಡದ ನೌಕರರ ಮುಂಬಡ್ತಿಗೆ ಸಂಬಂಧಿಸಿದಂತೆ ವಿಧೇಯಕ ಮಂಡನೆಯಾಗಿ ವಿಧಾನಮಂಡಲದಲ್ಲಿ ಅನುಮೋದನೆಯಾಗಿದ್ದು ಸಂತಸ ತಂದಿದೆ’ ಎಂದರು.
‘ಸಂವಿಧಾನ ದಿನದ ಆಚರಣೆ ದಿನದಂದೇ ಪರಿಶಿಷ್ಟರಲ್ಲಿ ಅನೇಕರು ಉಳಿತಾಯ ಮನೋಭಾವ ಹೊಂದಿ ಸಹಕಾರ ಸಂಘ ಸ್ಥಾಪನೆಗೆ ಮುಂದಾಗುತ್ತಿರುವುದು ಆರೋಗ್ಯಕರ ಸಮಾಜದ ನಿರ್ಮಾಣ ಆಗುತ್ತಿದೆ ಎಂಬುದರ ಶುಭ ಸೂಚನೆ’ ಎಂದು ಹೇಳಿದರು.
ಜೆಡಿಎಸ್ ಮುಖಂಡ ಬಿ.ಸತ್ಯನಾರಯಣ ಮಾತನಾಡಿ, ‘ಪರಿಶಿಷ್ಟ ಜಾತಿಯವರು ಸೇವಾ ಮನೋಭಾವದಿಂದ ಗುರುತಿಸಿಕೊಂಡವರು. ಇವರ ಕಾರ್ಯಕ್ಕೆ ಯಶಸ್ಸು ದೊರೆಯಲಿ’ ಎಂದು ತಿಳಿಸಿದರು.
ಕೋಡಿಹಳ್ಳಿ ಆದಿಜಾಂಬವ ಬೃಹ್ನಮಠದ ಮಾರ್ಕಂಡೇಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ.ಅಧ್ಯಕ್ಷೆ ಲತಾ ರವಿಕುಮಾರ್, ಜಿ.ಪಂ. ಸದಸ್ಯ ರಾಮಕೃಷ್ಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜು, ಎಪಿಎಂಸಿ ಉಪಾಧ್ಯಕ್ಷ ಹನುಂತಯ್ಯ, ಮುಖಂಡರಾದ ಬಿ.ಕೆ.ಮಂಜುನಾಥ್, ಕೊಟ್ಟಿ ಅಶೋಕ್, ಉಮೇಶ ಗೌಡ, ಲೋಕೇಶ್ ತಿಪ್ಪೇಶ್ಗೌಡ, ರಮೇಶ ಪಟೇಲ್, ಕೊಟ್ಟ ಶಂಕರ್, ಸಹಕಾರ ಸಂಘದ ಅಧ್ಯಕ್ಷ ಮುಸಕಲೋಟಿ ಮಂಜುನಾಥ್, ಉಪಾಧ್ಯಕ್ಷ ರಂಗನಾಥ್, ಸೂಡಾ ಸದಸ್ಯ ಮಂಜುನಾಥ್ ಇದ್ದರು.
ಭೇಟಿ: ಜೋಳದ ಚಿಗರು ತಿಂದು 48 ಕುರಿಗಳು ಮೃತಪಟ್ಟ ಕಾರಣ ಕಾನೂನು ಸಚಿವ ಟಿ.ಬಿ.ಜಯಚಂದ್ರ ಕರೇಕಲ್ಲಹಟ್ಟಿಗೆ ಭೇಟಿ ನೀಡಿ ನರಸಿಂಹಣ್ಣ ಅವರಿಗೆ ಧೈರ್ಯ ತುಂಬಿ ಶೀಘ್ರವಾಗಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.