ADVERTISEMENT

ಯತ್ತೇನಹಳ್ಳಿ ಕೆರೆಗೆ ಜೋಡಿ ಸಲಗ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2011, 9:55 IST
Last Updated 26 ನವೆಂಬರ್ 2011, 9:55 IST
ಯತ್ತೇನಹಳ್ಳಿ ಕೆರೆಗೆ ಜೋಡಿ ಸಲಗ
ಯತ್ತೇನಹಳ್ಳಿ ಕೆರೆಗೆ ಜೋಡಿ ಸಲಗ   

ತುಮಕೂರು: ತಾಲ್ಲೂಕಿನ ಯತ್ತೇನ ಹಳ್ಳಿ ಕೆರೆಯಲ್ಲಿ ಶುಕ್ರವಾರ ಮುಂಜಾನೆ ಎರಡು ಸಲಗಗಳು ನೀರಾಟವಾಡುವು ದನ್ನು ಕಂಡ ಜನತೆ ಹೌಹಾರಿದರು.

ನೆಲಮಂಗಲ ಅರಣ್ಯ ವಲಯದ ಗೊಂದಿಹಳ್ಳದಿಂದ ದೇವರಹೊಸಹಳ್ಳಿ ಕೆರೆ ಮಾರ್ಗವಾಗಿ ಯತ್ತೇನಹಳ್ಳಿಗೆ ಆನೆಗಳು ಬಂದಿವೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರದೇಶದಿಂದ ಯಾತ್ರೆ ಹೊರಟ ಆನೆಗಳ ಮೇಲೆ ಬುಧವಾರದಿಂದಲೂ ಅರಣ್ಯ ಇಲಾಖೆ ಕಣ್ಣಿಟ್ಟಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೇಳಿದರು.

ದೇವರಹೊಸಳ್ಳಿ ಕೆರೆಯಿಂದ ಬನ್ನೇರುಘಟ್ಟಕ್ಕೆ ವಾಪಸ್ ಕಳುಹಿಸಲು `ಚಾರ್ಜ್~ ಮಾಡಿದಾಗ ಆನೆಗಳು ಇತ್ತ ನುಗ್ಗಿದವು. ಶುಕ್ರವಾರ ರಾತ್ರಿಯವರೆಗೂ ಆನೆಗಳನ್ನು ವಾಪಸ್ ಕಳುಹಿಸಲು ಅರಣ್ಯ ಇಲಾಖೆ ಮತ್ತು ಪೊಲೀಸರು ಅವಿರತ ಶ್ರಮಿಸುತ್ತಿದ್ದಾರೆ. ಆದರೆ ಒಮ್ಮೆ ಬಂದ ದಾರಿ ಹಿಡಿಯುವ ಆನೆಗಳು, ಕೆಲವೇ ನಿಮಿಷದಲ್ಲಿ ಮನಸ್ಸು ಬದಲಿಸಿ ಯತ್ತೇನಹಳ್ಳಿಯತ್ತ ಹಿಂದಿರುಗುತ್ತಿವೆ.

ಶುಕ್ರವಾರ ರಾತ್ರಿ ಒಂದು ಹಂತದಲ್ಲಿ ಆನೆಗಳು ಗ್ರಾಮದತ್ತ ಮುಖ ಮಾಡಿದಾಗ ಗ್ರಾಮಸ್ಥರಲ್ಲಿ ಆತಂಕವಿತ್ತು. ಜನ ಮನೆ ಬಿಟ್ಟು ಹೊರಗೆ ಬರಲು ಹೆದರುತ್ತಿದ್ದರು. ಆನೆಗಳು ಮನಸ್ಸು ಬದಲಿಸಿ ಗ್ರಾಮದ ಎಡ ಭಾಗದಿಂದ ಹೊರಟ ನಂತರ ಎಲ್ಲರ ಮನದಲ್ಲಿ ನೆಮ್ಮದಿ ಕವಿಯಿತು.

ಮೈಸೂರಿನಲ್ಲಿ ಆನೆಯೊಂದು ಹಸು ಕೊಂದ ಘಟನೆ ಪತ್ರಿಕೆಯಲ್ಲಿ ಓದಿದ ನಂತರ ಆನೆಗಳು ಊರಿಗೆ ಬಂದರೆ ನಮ್ಮ ದನಕರುಗಳ ರಕ್ಷಣೆಯ ಚಿಂತೆ ಕಾಡುತ್ತದೆ. ಆನೆಗಳು ಬಂದಂತೆ ಹಿಂದಿರುಗಿದರೆ ಚಿಂತೆಯಿಲ್ಲ.

ಗಣೇಶನಿಗೆ ವಿಶೇಷ ಪೂಜೆ ಮಾಡಿಸ್ತೀವಿ. ತೋಟಗಳನ್ನು ಹಾಳು ಮಾಡಿದರೆ ಏನು ಮಾಡುವುದು? ಎಂದು ಗ್ರಾಮಸ್ಥರು ಅಸಹಾಯಕರಾಗಿ ಪ್ರಶ್ನಿಸುತ್ತಾರೆ. ಎರಡೂ ಸಲಗಗಳು ಯತ್ತೇನಹಳ್ಳಿ ಸುತ್ತಮುತ್ತ ಬೀಡುಬಿಟ್ಟಿರುವುದು ಜನರ ಆತಂಕ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT