ADVERTISEMENT

ಯೂರಿಯಾಗಾಗಿ ರೈತರ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 8:05 IST
Last Updated 4 ಅಕ್ಟೋಬರ್ 2012, 8:05 IST

ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿ ವ್ಯವಸಾಯ ಸಹಕಾರ ಸಂಘದ ಕೇಂದ್ರದಲ್ಲಿ ಸಮರ್ಪಕವಾಗಿ ಯೂರಿಯಾ ಗೊಬ್ಬರ ನೀಡುತ್ತಿಲ್ಲ ಎಂದು ಆರೋಪಿಸಿ ರೈತರು ಬುಧವಾರ  ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗಿದ್ದು, ಬೆಳೆಗಳಿಗೆ ಯೂರಿಯಾ ಗೊಬ್ಬರ ಅಗತ್ಯವಾಗಿ ಹಾಕಿದಲ್ಲಿ ಉತ್ತಮ ಫಸಲು ನಿರೀಕ್ಷಿಸಬಹುದು. ಆದರೆ ಇಲ್ಲಿನ ವಿಎಸ್‌ಎಸ್‌ಎನ್ ಕೇಂದ್ರದಲ್ಲಿ ಗೊಬ್ಬರವನ್ನು ಸಮರ್ಪಕವಾಗಿ ನೀಡದೆ ರೈತರಿಗೆ ವಂಚನೆ ಮಾಡಲಾಗುತ್ತಿದೆ. ಗೋಡನ್‌ಗೆ ಬಂದ ಗೊಬ್ಬರವನ್ನು ನಿಗದಿತ ವೇಳೆಯಲ್ಲಿ ಮಾರಾಟ ಮಾಡದೆ ಬೇಕಾದವರಿಗೆ ಮುಂಜಾನೆ ಅಥವಾ ಸಂಜೆ ವೇಳೆ ಮಾರಾಟ ಮಾಡಲಾಗುತ್ತಿದೆ.

ಎರಡು ದಿನಗಳ ಹಿಂದೆಯೇ ಗೊಬ್ಬರಕ್ಕಾಗಿ ಕೆಲ ರೈತರಿಗೆ ಚೀಟಿ ನೀಡಿದ್ದು, ನಿಗದಿತ ಸಮಯಕ್ಕೆ ಬಂದಾಗ ಯೂರಿಯಾ ಗೊಬ್ಬರ ಇಲ್ಲ ಎಂಬ ಸಬೂಬು ಹೇಳಿ ವಾಪಸ್ ಕಳುಹಿಸಲಾಗುತ್ತಿದೆ. ಯೂರಿಯಾ ಗೊಬ್ಬರ ಮಂಗಳವಾರ ಸಂಜೆ ಗೋಡನ್‌ಗೆ ಯೂರಿಯಾ ಬಂದಿದ್ದರೂ ಬುಧವಾರ ಬೆಳಿಗ್ಗೆ 7 ಗಂಟೆಗಾಗಲೇ ಖಾಲಿಯಾಗಿದೆ ಎಂದು ಇಲ್ಲಿನ ನೌಕರರು ದೌರ್ಜನ್ಯದಿಂದ ವರ್ತಿಸುತ್ತಾರೆ ಎಂದು ರೈತರು ಆರೋಪಿಸಿದರು.

ತಾಲ್ಲೂಕಿನಲ್ಲಿ 4-5 ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಯೂರಿಯಾ ಪೂರೈಕೆಯಾಗದ ಕಾರಣ ಸಮಸ್ಯೆ ಉಂಟಾಗಿದೆ.

ಆದ ಕಾರಣ ಈಗಿರುವ ಬೇಡಿಕೆಯಷ್ಟು ಯೂರಿಯಾ ಗೊಬರಕ್ಕೆ ಇಂಡೆಂಟ್ ಹಾಕಲಾಗಿದ್ದು, ಇನ್ನೆರಡು ದಿನಗಳಲ್ಲಿ ತಾಲ್ಲೂಕಿಗೆ ಅವಶ್ಯಕವಿರುವಷ್ಟು ಯೂರಿಯಾ ಪೂರೈಸಲಾಗುತ್ತದೆ. ಅದರಂತೆ ಕೆಲ ರೈತರಿಗೆ ಚೀಟಿ ನೀಡಲಾಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಟಿ.ಎನ್.ಅಶೋಕ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.