ತುಮಕೂರು: ರಸ್ತೆಯಲ್ಲೇ ಹೂತು ಹೋಗಿರುವ ಈ ಪೆಟ್ಟಿಗೆ ನಿತ್ಯ ಒಂದಿಲ್ಲೊಂದು ರೀತಿ ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಕಬ್ಬಿಣದ ಪೆಟ್ಟಿಗೆ ಇರುವುದು ನಗರದ ಎಸ್.ಐ.ಟಿ ಮುಖ್ಯ ರಸ್ತೆಯಲ್ಲಿ (ಟಿಜಿಎಂಸಿ ಬ್ಯಾಂಕ್ ಎಟಿಎಂ ಎದುರು). ಈ ರಸ್ತೆಯಲ್ಲಿ ಸದಾ ವಾಹನ ಸಂಚಾರ, ಜನಸಂಚಾರ ದಟ್ಟಣೆ ಇರುತ್ತದೆ. ವೇಗವಾಗಿ ಸಾಗಿ ಬರುವ ವಾಹನಗಳ ಸವಾರರಿಗೆ ಈ ಪೆಟ್ಟಿಗೆ ಧಿಢೀರ್ ಗೋಚರಿಸುತ್ತದೆ.
ಕೆಲವರು ಬ್ರೇಕ್ ಹಾಕಿ ಪಕ್ಕದಲ್ಲಿ ಹೋದರೆ ಇನ್ನೊಂದಿಷ್ಟು ಸವಾರರು ಇದರ ಮೇಲೆಯೇ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎಂದು ಸುತ್ತಮುತ್ತಲಿನ ವ್ಯಾಪಾರಸ್ಥರು ಹೇಳುತ್ತಾರೆ.
ಏನಿದು ಪೆಟ್ಟಿಗೆ?
ಇಲ್ಲಿರುವ ಪೆಟ್ಟಿಗೆ ದೂರ ಸಂಪರ್ಕ ಇಲಾಖೆಗೆ ಸಂಬಂಧಪಟ್ಟಿದ್ದು. 7–8 ವರ್ಷಗಳ ಹಿಂದೆ ಇಲ್ಲಿ ಕಬ್ಬಿಣದ ಪೆಟ್ಟಿಗೆ ಇತ್ತು. ಇಲಾಖೆಯ ಉಪೇಕ್ಷೆಯಿಂದಲೊ ಅಥವಾ ರಸ್ತೆ ನಿರ್ಮಾಣ ಮಾಡುವಾಗಲೊ ಬಿದ್ದಿದೆ. ಅದನ್ನು ಹಾಗೆಯೇ ಬಿಡಲಾಗಿದೆ.
ಅದರ ಮೆಲೆಯೇ ಡಾಂಬರ್ ಹಾಕಿ ರಸ್ತೆ ನಿರ್ಮಾಣ ಮಾಡಿದ್ದು ಉಂಟು. ಕೆಲ ದಿನಗಳ ಬಳಿಕ ಮತ್ತೆ ಈ ಪೆಟ್ಟಿಗೆ ಎದ್ದು ಕುಳಿತು ಅಪಾಯಕ್ಕೆ ಕಾರಣವಾಗುತ್ತಿದೆ. ಸಂಬಂಧಪಟ್ಟವರು ಗಮನಹರಿಸಿ ತೆರವುಗೊಳಿಸಿದರೆ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ನಾಗರಾಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.