ಶಿರಾ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದರೂ; ಇದೂವರೆಗೂ ಪರಿಹಾರ ಹಣ ಬಿಡುಗಡೆಯಾಗಿಲ್ಲ ಎಂದು ಬಿಎಸ್ಆರ್ ಪಕ್ಷದ ಸ್ಥಾಪಕ ಬಿ.ಶ್ರೀರಾಮುಲು ಟೀಕಿಸಿದರು.
ಪಾದಯಾತ್ರೆ ಮೂಲಕ ತಾಲ್ಲೂಕು ಪ್ರವೇಶಿಸಿದ ಅವರು, ತಾವರೇಕೆರೆ ಕಾರ್ಯಕರ್ತರ ಮನೆಯಲ್ಲಿ ಮಾತನಾಡಿ, ಕೇವಲ ಪಕ್ಷದ ಸಂಘಟನೆಗೆ ಒತ್ತು ನೀಡುತ್ತಿರುವುದು ರಾಜ್ಯದ ರೈತರಿಗೆ ಮಾಡಿರುವ ಅನ್ಯಾಯ. ಮಳೆ ಇಲ್ಲದೆ ಮುಗಿಲು ನೋಡುತ್ತಿರುವ ರೈತನಿಗೆ ಕನಿಷ್ಠ ಸೌಜನ್ಯ ತೋರಿಸದಿರುವುದು ದುರದೃಷ್ಟಕರ ಎಂದರು.
ರಾಜ್ಯದ ಮುಖ್ಯಮಂತ್ರಿ ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ, ಕೇಂದ್ರಕ್ಕೆ ಬರ ಕುರಿತು ಸಮಗ್ರ ಅಧ್ಯಯನ ಮಾಹಿತಿ ನೀಡಿ ಪರಿಹಾರ ಕೋರಿದ್ದಾರೆ. ಆದರೆ ಪಕ್ಕದ ಆಂಧ್ರಕ್ಕೆ ಪೂರ್ಣ ಪ್ರಮಾಣದ ಪರಿಹಾರ ನೀಡಿ, ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ತಲುಪುವ ವೇಳೆಗೆ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದು ಅನಿಶ್ಚಿತ. ಏಳು ಜಿಲ್ಲೆಗಳಲ್ಲಿಯೂ ಬಿಎಸ್ಆರ್ ಪಕ್ಷಕ್ಕೆ ಪಕ್ಷಾತೀತವಾಗಿ ಬೆಂಬಲ ದೊರೆತಿದೆ ಎಂದರು.
ಕಂಪ್ಲಿ ಶಾಸಕ ಸುರೇಶ್ಬಾಬು ಸೇರಿದಂತೆ ಕಾರ್ಯಕರ್ತರು ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.