ತುಮಕೂರು: ರೋಮ್ನ ವ್ಯಾಟಿಕನ್ನಲ್ಲಿ ನಡೆದ ಅಂತರ್ ಧರ್ಮೀಯ ಸಂವಾದ ಮತ್ತು ಚರ್ಚೆ ಕುರಿತ ಅಧಿವೇಶನದಲ್ಲಿ ಹಿಂದೂ ಧರ್ಮದ ಪ್ರತಿನಿಧಿಗಳಾಗಿ ಭಾರತದಿಂದ ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ, ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಮತ್ತು ಸ್ವಾಮಿ ಪರಮಾನಂದ ಸರಸ್ವತಿ ಅವರು ಭಾಗವಹಿಸಿದ್ದರು.
ವಿಶ್ವ ಕ್ಯಾಥೊಲಿಕ್ ಗುರುಗಳಾದ ಪೋಪ್ ಫ್ರಾನ್ಸಿಸ್ ಅವರ ಆಹ್ವಾನದ ಮೇರೆಗೆ ಇವರು ಅಲ್ಲಿಗೆ ಭೇಟಿ ನೀಡಿದ್ದರು. ಸ್ವಾಮಿ ನಿರ್ಭಯಾನಂದಜೀ, ವೀರೇಶಾನಂದಜೀ, ಪರಮಾನಂದಜೀ ಅವರು ಪೋಪ್ ಅವರ ನಿವಾಸದಲ್ಲಿ ವೇದಘೋಷ ಮಾಡಿದರು. ಬಳಿಕ ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಮೀಜಿಯವರು ಸನ್ಮಾನಿಸಿದರು. ಸನ್ಮಾನಕ್ಕೆ ಪೋಪ್ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೋಪ್ ಅವರು, ‘ಈ ಅಧಿವೇಶನದಲ್ಲಿ ಈವರೆಗೆ ಅಪರಿಚಿತವಿದ್ದ ಅಂಶಗಳು ಅರ್ಥವಾಗಿವೆ. ದ್ವೇಷ ಮತ್ತು ಘರ್ಷಣೆ ಕಾಣುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಸೌಹಾರ್ದ ಮೂಡಿಸುವ ಅಧಿವೇಶನ ನಡೆಯುವುದು ಅವಶ್ಯವಾಗಿತ್ತು' ಎಂದರು.
‘ಧಾರ್ಮಿಕ ಮುಖಂಡರು ಭಗವಂತನ ಸೃಷ್ಟಿ. ನಿಮ್ಮ ನಿಮ್ಮ ಧಾರ್ಮಿಕ ಪರಂಪರೆಗೆ ಅನುಸಾರವಾಗಿ ಸಮಷ್ಟಿ ಹಿತವನ್ನು ಗಮನದಲ್ಲಿರಿಸಿಕೊಂಡು ಸೌಹಾರ್ದ ಭಾವನೆ ಪುಷ್ಟೀಕರಿಸಿರುವುದು ಶ್ಲಾಘನೀಯ' ಎಂದು ಬಣ್ಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.