ADVERTISEMENT

ಶಿರಾದಲ್ಲಿ ಜಯಚಂದ್ರ ಸೋತಿದ್ದು ಏಕೆ?

​ಪ್ರಜಾವಾಣಿ ವಾರ್ತೆ
Published 17 ಮೇ 2018, 6:30 IST
Last Updated 17 ಮೇ 2018, 6:30 IST
ಶಿರಾದಲ್ಲಿ ಜಯಚಂದ್ರ ಸೋತಿದ್ದು ಏಕೆ?
ಶಿರಾದಲ್ಲಿ ಜಯಚಂದ್ರ ಸೋತಿದ್ದು ಏಕೆ?   

ಶಿರಾ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಸೋಲಿನ ರುಚಿ ತೋರಿಸುವ ಮೂಲಕ ಬಿ.ಸತ್ಯನಾರಾಯಣ ಅವರು ಎರಡು ಸಲದ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ.

‘ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಗೆಲುವು ಖಚಿತ’ ಎಂದು ನಂಬಿದ್ದ ಟಿ.ಬಿ.ಜಯಚಂದ್ರ ಅವರಿಗೆ ಮತದಾರರು ನೀಡಿದ ತೀರ್ಪು ಆಘಾತ ನೀಡಿದೆ.

ಸಚಿವ ಸ್ಥಾನ ದೊರೆತ ನಂತರ ಟಿ.ಬಿ.ಜಯಚಂದ್ರ ಅವರು ಕ್ಷೇತ್ರವನ್ನು ಕಡೆಗಣಿಸಿದ್ದು, ತಮಗೆ ಬೇಕಾದ ಕೆಲವರಿಗೆ ಮಾತ್ರ ಮಣೆ ಹಾಕಿದ್ದು, ಸ್ಥಳೀಯ ಮುಖಂಡರನ್ನು ದೂರ ಇರಿಸಿ ತನ್ನ ಆಪ್ತ ಸಹಾಯಕ ರವಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದರಿಂದ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಇದು ಸೋಲಿಗೆ ಒಂದು ಪ್ರಮುಖ ಕಾರಣ.

ADVERTISEMENT

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಸಾಸಲು ಸತೀಶ್‌ಗೆ ಟಿಕೇಟ್ ತಪ್ಪಿಸಿ ತನ್ನ ಪುತ್ರ ಸಂತೋಷ್ ಜಯಚಂದ್ರ ಅವರಿಗೆ ಟಿಕೆಟ್‌ ಕೊಡಿಸಿದ್ದರಿಂದ ಎಂದು ಗೊಲ್ಲ ಸಮುದಾಯವು ಅಸಮಾಧಾನಗೊಂಡಿದ್ದು ಚುನಾವಣೆಯಲ್ಲಿ ದೊಡ್ಡ ಪೆಟ್ಟು ನೀಡಿತು.

ಜಯಚಂದ್ರ ಸ್ಥಳೀಯರಲ್ಲ, ಅವರನ್ನು ಈ ಬಾರಿ ಸೋಲಿಸಲೇಬೇಕು ಎಂದು ಒಂದು ಅಂಶದ ಕಾರ್ಯಕ್ರಮವನ್ನು ರೂಪಿಸಿಕೊಂಡು ಅವರ ಜೊತೆಯಲ್ಲಿ ಇದ್ದವರೇ ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದು ಹಾಗೂ ಚುನಾವಣೆ ಸಮಯದಲ್ಲಿ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ಹುಳಿಗೆರೆ ಮೂಡಲಗಿರಿಯಪ್ಪ, ಮುಡಿಮಡು ಮಂಜುನಾಥ್ ಸೇರಿಂದತೆ ಹಲವಾರು ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣವಾಯಿತು.

ಬಿ.ಸತ್ಯನಾರಾಯಣ 2 ಬಾರಿ ಸೋತಿದ್ದಾರೆ ಎನ್ನುವ ಅನುಕಂಪದ ಅಲೆ ಹಾಗೂ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಜೆಡಿಎಸ್ ಬೆಂಬಲಿಸಬೇಕು ಎಂದು ಜನರು ನಿರ್ಧಾರ ಮಾಡಿದ್ದರಿಂದಲೂ ಕಾಂಗ್ರೆಸ್ ಪಕ್ಷ ನೆಲಕಚ್ಚುವಂತಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.