ಕೊಡಿಗೇನಹಳ್ಳಿ: ಐ.ಡಿ.ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ 59.2 ಮಿಲಿ ಮೀಟರ್ ಮಳೆಯಿಂದ ದೊಡ್ಡದಾಳವಾಟ್ಟ ಕೆರೆ ಕೋಡಿ ಬಿದ್ದು ಸಂಚಾರಕ್ಕೆ ಅಡ್ಡಿಯಾದರೆ, ಇತಿಹಾಸ ಪ್ರಸಿದ್ಧ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದ ಒಳಗೆ ನೀರು ತುಂಬಿ ಭಕ್ತರು ಪರದಾಡುವಂತಾಯಿತು.
ಈ ಭಾಗದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಒಂದೆಡೆ ಮೆಕ್ಕೆಜೋಳ, ಮೆಣಸಿನ ಗಿಡ, ರಾಗಿ ಬೆಳೆ ಮತ್ತು ಶೇಂಗಾ ಬೆಳೆಗಳಿಗೆ ನೀರು ತುಂಬಿ ಕೊಳೆತು ಹೋಗುತ್ತಿರುವುದು ದುಃಖ ಎನಿಸಿದೆ. ಮತ್ತೊಂದೆಡೆ ಕೆರೆಗಳು 13 ವರ್ಷಗಳ ನಂತರ ತುಂಬಿ ಕೋಡಿ ಬಿದ್ದು, ಎಲ್ಲ ಕೆರೆಗಳಿಗೆ ನೀರು ಬರುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ’ ಎಂದು ಡಿ.ಎನ್.ನರಸಿಂಹ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿಕ್ಕದಾಳವಟ್ಟ, ದೊಡ್ಡದಾಳವಾಟ್ಟ, ತಂಡೋಟಿ, ಹೊಸ ಇಟಕಲೋಟಿ, ಜನಕಲೋಟಿ, ಗೂಲಹಳ್ಳಿ, ತಾಡಿ, ದಾದಗೊಂಡನಹಳ್ಳಿ ಕೆರೆಗಳು ಕೋಡಿ ಬಿದ್ದಿವೆ. ತಾಲ್ಲೂಕು ಅತಿ ಹಿಂದುಳಿದ ಹಾಗೂ ಬಯಲುಸೀಮೆ ಪ್ರದೇಶವಾಗಿರುವುದರಿಂದ ಶಾಸಕರು ನದಿ, ಹಳ್ಳ– ಕೊಳ್ಳಗಳ ಹಲವಾರು ಸ್ಥಳಗಳಲ್ಲಿ ಚೆಕ್ ಡ್ಯಾಂ ಮತ್ತು ಡೈಕ್ಗಳನ್ನು ನಿರ್ಮಿಸಿರುವುದರಿಂದ ಕೆರೆಗಳಿಗೆ ನೀರು ಸರಾಗವಾಗಿ ಹರಿಯಲು ಸಹಕಾರಿಯಾಗಿದೆ.
ಮುಂದೆ ಇದೇ ರೀತಿ ಉತ್ತಮ ಮಳೆಯಾಗಿ ನದಿಗಳು ತುಂಬಿ ಹರಿದರೆ ಇಲ್ಲಿನ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ದೊಡ್ಡಯಲ್ಕೂರು ಲಕ್ಷ್ಮಿಪತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.