ADVERTISEMENT

ಸಂತೋಷವೇ ಸರ್ವಸ್ವ: ಸಿ.ಆರ್.ಸಿಂಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 7:35 IST
Last Updated 20 ಏಪ್ರಿಲ್ 2012, 7:35 IST

ತುಮಕೂರು: ನಗರದ ಸಿದ್ದಗಂಗ ತಾಂತ್ರಿಕ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಉತ್ಸವ `ಹ್ಯಾಲ್ಸಿಯಾನ್~ಗೆ ಗುರುವಾರ ಚಿತ್ರನಟ ಸಿ.ಆರ್.ಸಿಂಹ ಚಾಲನೆ ನೀಡಿದರು.ಸಂಸ್ಕೃತಿ, ಸಾಹಿತ್ಯ, ಕಲೆ, ವಿನೋದವಿಲ್ಲದ ವಿದ್ಯಾರ್ಥಿ ಜೀವನವೇ ಅರ್ಥಹೀನ.

ಯಾವುದೇ ವ್ಯಕ್ತಿ ತನ್ನ ಇಡೀ ಜೀವನದಲ್ಲಿ ವಿದ್ಯಾರ್ಥಿ ಬದುಕನ್ನು ನೆನಪಿಟ್ಟುಕೊಂಡಿರುತ್ತಾನೆ. ಸೆಮಿಸ್ಟರ್ ಪದ್ಧತಿ ಮತ್ತು ಓದಿನ ಹೊರೆ ವ್ಯಕ್ತಿತ್ವ ವಿಕಸನಕ್ಕೆ ಎಂದಿಗೂ ತೊಡಕಾಗಬಾರದು ಎಂದು ನುಡಿದರು.

ಎಂಜಿನಿಯರಿಂಗ್, ವೈದ್ಯಕೀಯ ಓದುವುದು ಶ್ರೇಯಸ್ಕರ ಎಂಬ ತಪ್ಪು ಅಭಿಪ್ರಾಯ ಸಮಾಜದಲ್ಲಿದೆ. ಪೋಷಕರ ಹೊರೆಯಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಈ ಕೋರ್ಸ್‌ಗಳಿಗೆ ಸೇರಿಕೊಳ್ಳುತ್ತಾರೆ. ಮೊದಲನೇ ದರ್ಜೆ ಕಲಾವಿದನಾಗಬಹುದಾಗಿದ್ದ ವ್ಯಕ್ತಿ ಮೂರನೇ ದರ್ಜೆ ಎಂಜಿನಿಯರ್ ಆಗುತ್ತಿದ್ದಾನೆ. ಇಂಥ ವಿಪರ್ಯಾಸಗಳನ್ನು ಎಚ್ಚರಿಕೆಯಿಂದ ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಯಶಸ್ಸನ್ನು ಹಣದಿಂದ ಅಳೆಯಲಾಗುತ್ತಿದೆ. ಹೆಚ್ಚು ಸಂಬಳ, ದೊಡ್ಡ ಕಾರು, ದೊಡ್ಡ ಮನೆ ಸೇರಿದಂತೆ ಭೌತಿಕ ಜಗತ್ತಿನಲ್ಲಿ ಆಸ್ತಿ ಸಂಪಾದಿಸುವ ಹಾಗೂ ಸಂಪತ್ತು ಕೂಡಿಡುವ ಹುಚ್ಚು ಸ್ಪರ್ಧೆ ಎಲ್ಲೆಡೆ ಕಂಡು ಬರುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು.

ಯಶಸ್ಸನ್ನು ಮನಃಶಾಂತಿಯಿಂದ ಅಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಎಸ್‌ಐಟಿ ಪ್ರಾಚಾರ್ಯ ಡಾ. ಶಿವಕುಮಾರಯ್ಯ ಮಾತನಾಡಿದರು. ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ, ಡೀನ್ ಪ್ರೊ. ಬಸವರಾಜಯ್ಯ, ವಿದ್ಯಾರ್ಥಿ ಪ್ರತಿನಿಧಿ ಗಳಾದ ಮಯೂರ್ ಅಗ್ನಿಹೋತ್ರಿ, ವೈಭವ್ ಜೈನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.