ADVERTISEMENT

ಸಂವಿಧಾನ ಸ್ವರೂಪ ಬದಲಾಯಿಸುವ ಹುನ್ನಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 6:26 IST
Last Updated 25 ಡಿಸೆಂಬರ್ 2017, 6:26 IST
ಸಮ್ಮೇಳನದಲ್ಲಿ ಪಿ.ವಿ.ಲೋಕೇಶ್ ಮಾತನಾಡಿದರು. ಶಿವಣ್ಣ, ಗಿರೀಶ್, ಎನ್.ಸ್ವಾಮಿ, ರಾಮಚಂದ್ರಪ್ಪ, ಎನ್.ಕೆ.ಸುಬ್ರಮಣ್ಯ, ಜ್ಯೋತಿ ಇದ್ದರು
ಸಮ್ಮೇಳನದಲ್ಲಿ ಪಿ.ವಿ.ಲೋಕೇಶ್ ಮಾತನಾಡಿದರು. ಶಿವಣ್ಣ, ಗಿರೀಶ್, ಎನ್.ಸ್ವಾಮಿ, ರಾಮಚಂದ್ರಪ್ಪ, ಎನ್.ಕೆ.ಸುಬ್ರಮಣ್ಯ, ಜ್ಯೋತಿ ಇದ್ದರು   

ತುಮಕೂರು: ‘ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಸಂವಿಧಾನದ ಮೂಲ ಸ್ವರೂಪವನ್ನೇ ಬದಲಾಯಿಸುವ ಹುನ್ನಾರ ನಡೆಸುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದುದು. ಸಂಘಟಿತ ಹೋರಾಟದಿಂದ ಇಂತಹ ಅಪಾಯಗಳನ್ನು ಹಿಮ್ಮೆಟ್ಟಿಸಲು ಸಾಧ್ಯ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್ ಹೇಳಿದರು.

ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ತುಮಕೂರು ಜಿಲ್ಲಾ ಘಟಕವು  ಭಾನುವಾರ ಆಯೋಜಿಸಿದ್ದ 12ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ‘ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಸಂವಿಧಾನಕ್ಕೆ ತಿದ್ದುಪಡಿ ತರಬಹುದು.  ಮತ್ತೊಂದೆಡೆ ಕೋಮುವಾದಕ್ಕೆ ಪುಷ್ಟಿ ನೀಡುತ್ತಿದೆ. ಜಾತ್ಯತೀತ ಶಕ್ತಿಗಳು ಏಕತೆಯಿಂದ ಹೋರಾಟ ನಡೆಸಿದರೆ ಮಾತ್ರ ಇದನ್ನು ತಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

‘ದೇಶವ್ಯಾಪಿ ಅನೇಕ ರಾಜಕೀಯ ಪಕ್ಷಗಳಿವೆ. ಕಾಂಗ್ರೆಸ್, ಜೆಡಿಎಸ್ ಸೇರಿ ಅನೇಕ ರಾಜಕೀಯ ಪಕ್ಷಗಳು ಬಿಜೆಪಿ ಸೋಲಿಸಬೇಕು ಎಂದೇ ಹೇಳುತ್ತವೆ. ಆದರೆ, ವಾಸ್ತವಿಕವಾಗಿ ಸಂಘಟಿತ ಪ್ರಯತ್ನ ಎಲ್ಲೂ ಕಾಣುತ್ತಿಲ್ಲ. ವಿಧಾನಸಭಾ, ಲೋಕಸಭೆ ಚುನಾವಣೆಗಳು ಪ್ರಧಾನಿ ನರೇಂದ್ರ ಮತ್ತು ರಾಹುಲ್ ಗಾಂಧಿ ನಡುವಿನ ಯುದ್ಧವೆಂಬುವ ರೀತಿ ಈಚೆಗೆ ಬಿಂಬಿಸಲಾಗುತ್ತಿದೆ. ಬಿಜೆಪಿಯವರೇ ಬುದ್ಧಿಪೂರ್ವಕವಾಗಿ ಮಾಡಿದ ತಂತ್ರವಿದು’ ಎಂದು ಆರೋಪಿಸಿದರು.

ADVERTISEMENT

‘ಗುಜರಾತ್ ಮತ್ತು ಪಶ್ಚಿಮ ಬಂಗಾಲದಲ್ಲಿ ಹಣ ಬಲ, ತೋಳ್ಬಲದಿಂದ ಮತ್ತು ಪ್ರಧಾನಿಯೇ ಬೀದಿ ಬೀದಿಗಳಲ್ಲಿ ಭಾಷಣ ಮಾಡಿದ್ದರಿಂದ ಬಿಜೆಪಿ ಗೆದ್ದಿದೆ. ಆದರೆ, ರಾಜ್ಯದಲ್ಲಿ ನಡೆಯುವ ಮುಂದಿನ ವಿಧಾನ ಸಭಾ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲೇಬೇಕು’ ಎಂದು ಕರೆ ನೀಡಿದರು.

’ಜನಪರ, ರೈತ ಪರ, ಬಡವರ ಯಾವ ಯೋಜನೆಗಳನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ.ಹಿಂದೆ ಯುಪಿಎ ಸರ್ಕಾರದ ನೀತಿಗಳು ಜನವಿರೋಧಿಯಾಗಿವೆ ಎಂದು ಜನರು ಮೋದಿ ಆಯ್ಕೆ ಮಾಡಿದರೊ ಅದೇ ಮೋದಿ ಅವರು ಯುಪಿಎ ಸರ್ಕಾರದಲ್ಲಿದ್ದ ನೀತಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಜನವಿರೋಧಿ ಆಡಳಿತ ನಡೆಸುತ್ತಿದ್ದಾರೆ’ ಎಂದು ದೂರಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ‘ಎಡಪಕ್ಷಗಳು ಮಾತ್ರ ದೇಶದಲ್ಲಿ ಚಳವಳಿ ಕಟ್ಟುತ್ತಿವೆ. ಸದಾ ಜನಪರವಾಗಿ ಕೆಲಸ ಮಾಡುತ್ತದೆ. ಚುನಾವಣೆ ಬಂದಾಗ ಮಾತ್ರ ಜನರು ಈ ಎಡಪಕ್ಷಗಳನ್ನು ಮರೆಯುತ್ತಿರುವುದು ವಿಪರ್ಯಾಸವಾಗಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ’ ಎಂದರು.

‘ದೇಶದಲ್ಲಿ ರೈತಪರ, ಕಾರ್ಮಿಕರ ಪರ, ಬಡವರ ಯಾವ ಸರ್ಕಾರಗಳೂ ಇಲ್ಲ. ಬರೀ ಕಾರ್ಪೊರೇಟ್ ಕಂಪೆನಿಗಳ ಪರವಾಗಿವೆ. ಇಂತಹ ಸ್ಥಿತಿಯಲ್ಲಿ ದುಡಿಯುವ ವರ್ಗ, ರೈತರು, ಕಾರ್ಮಿಕರು, ಅಂಗನವಾಡಿ, ಆಶಾ, ಬಿಸಿಯೂಟ ನೌಕರರು ಸೇರಿದಂತೆ ಶ್ರಮಿಕ ವರ್ಗದವರು ಎಡಪಕ್ಷಗಳ ಹೋರಾಟಕ್ಕೆ ಬೆಂಬಲವಾಗಿರಬೇಕು’ ಎಂದು ಹೇಳಿದರು. ಎಸ್‌.ಯು.ಸಿ.ಐ ಜಿಲ್ಲಾ ಮುಖಂಡ ಎನ್.ಸ್ವಾಮಿ ಮಾತನಾಡಿ, ‘ಜಾತಿ, ಧರ್ಮ ಮೀರಿದ ಚಳವಳಿಯಿಂದ ಮಾತ್ರ ಕೋಮುವಾದ ಹಿಮ್ಮೆಟ್ಟಿಸಲು ಸಾಧ್ಯ’ ಎಂದು ಹೇಳಿದರು.

ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ‘ಬಡವರು, ಕಾರ್ಮಿಕರು, ದುಡಿಯುವ ವರ್ಗದ ಹಿತ ಕಡೆಗಣಿಸುವ ಸರ್ಕಾರಗಳ ಧೋರಣೆಗಳನ್ನು ಖಂಡಿಸಬೇಕು. ಜಾತಿ, ಧರ್ಮ, ಕೋಮುವಾದ. ಸಂಘಪರಿವಾರ ಅಣತಿಯಂತೆ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಯಾರೂ ಬೆಂಬಲಿಸಬಾರದು’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸ್ವಾಮಿನಾಥ್ ವರದಿ ಅನುಷ್ಠಾನ ಮಾಡುತ್ತೇನೆ. ದೇಶದ ಪ್ರತಿ ನಾಗರಿಕರ ಬಾಂಕ್ ಖಾತೆಗೆ ₹ 15 ಲಕ್ಷ ಜಮೆ ಮಾಡುತ್ತೇನೆ. ಕಪ್ಪು ಹಣ ತರುತ್ತೇನೆ ಎಂದು ಹೇಳಿದ್ದರು. ಆದರೆ, ಯಾವುದನ್ನೂ ಮಾಡಿಲ್ಲ. ಕನಿಷ್ಠ ಪಕ್ಷ ಶ್ರಮಿಕ ಕಾರ್ಮಿಕರ ಹಿತ ಕಾಪಾಡುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಮುಖಂಡ ಗಿರೀಶ್, ಎಐಎಸ್‌ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ಘಟಕದ ಅಧ್ಯಕ್ಷೆ ಜ್ಯೋತಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ರ್‍ಯಾಲಿ ನಡೆಸಲಾಯಿತು.

ಜನಪರ ಸರ್ಕಾರ ತರುವ ಶಕ್ತಿ ಇದೆ

‘ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಎಡಪಕ್ಷಗಳ ಅಭ್ಯರ್ಥಿಗಳು ನಿಲ್ಲಲು ಸಾಧ್ಯವಿಲ್ಲ. ನಮ್ಮ ಹತ್ತಿರ ಬಂಡವಾಳವೂ ಇಲ್ಲ. ಆದರೆ, ಜನಪರ ಸರ್ಕಾರ ರೂಪಿಸುವ ಶಕ್ತಿ ಮಾತ್ರ ಇದೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು’ ಎಂದು ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಕೆ.ರಾಮಚಂದ್ರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.