ADVERTISEMENT

ಸದಸ್ಯರ ಆರೋಪಕ್ಕೆ ಪೌರಾಯುಕ್ತ ಪ್ರತ್ಯುತ್ತರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:10 IST
Last Updated 4 ಜುಲೈ 2012, 5:10 IST

ತಿಪಟೂರು: ನಗರಸಭೆ ಸಾಮಾನ್ಯ ಸಭೆಯಲ್ಲಿ ನಗರದ ಮೂಲ ಸಮಸ್ಯೆಗೆ ಕಾರಣವೊಡ್ಡಿ ತಮ್ಮ ವಿರುದ್ಧ ಆರೋಪಿಸಿದ ಕೆಲ ಸದಸ್ಯರಿಗೆ ಪೌರಾಯುಕ್ತ ಡಾ.ವೆಂಕಟೇಶಯ್ಯ ದಾಖಲೆ ಸಹಿತ ಪ್ರತ್ಯುತ್ತರ ನೀಡಿ ತಮ್ಮ ತಪ್ಪಿದ್ದರೆ ಕ್ರಮ ಕೈಗೊಳ್ಳಿ ಎಂದು ನೇರವಾಗಿ ಘೋಷಿಸಿದರು.

ಪೌರಾಯುಕ್ತರು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರಿಂದ ನಗರದ ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸಮಸ್ಯೆ ಬಿಗಡಾಯಿಸಿದೆ ಎಂದು ಆರೋಪಿಸಿ ಸಭೆಯಲ್ಲಿ ಧರಣಿ ಕುಳಿತಿದ್ದರಿಂದ ಮುಂದೂಡಿದ್ದ ಸಭೆ ಈಚೆಗೆ ನಡೆಯಿತು.

ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಾದ ವಿಶಾಲ, ಹೇಮಾ, ಜುಬೇದಾಬಿ, ಹೂರ್‌ಬಾನು, ಮಮತಾ, ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಗೇಪಲ್ಲಿ ನಟರಾಜ್ ಮತ್ತಿತರರು ಮತ್ತೆ ಧರಣಿ ಕುಳಿತು ಪೌರಾಯುಕ್ತರ ವಿರುದ್ಧ ದನಿ ಎತ್ತಿದರು. ಅಧ್ಯಕ್ಷರ ಅನುಮತಿ ಪಡೆದು ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರಿಸಿದ ಪೌರಾಯುಕ್ತ, ದಾಖಲೆಗಳನ್ನು ಮುಂದಿಟ್ಟು ಮೂಲ ಸೌಲಭ್ಯ ಒದಗಿಸುವಲ್ಲಿ ತಮ್ಮ ತಪ್ಪೇನೆಂದು ಪ್ರಶ್ನಿಸಿದರು.

ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಆಗಿ ಹೋಗಿದ್ದನ್ನು ಚರ್ಚೆ ಮಾಡುತ್ತಾ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಲಭ್ಯ ಅನುದಾನ ಬಳಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತರಾಗೋಣ. ಎಲ್ಲ ಸದಸ್ಯರು ಇದಕ್ಕೆ ಬದ್ಧರಾಗಿ ನಿಲ್ಲುತ್ತೇವೆ. ಅಧಿಕಾರಿಗಳು ಪರಿಶ್ರಮದಿಂದ ತುರ್ತಾಗಿ ಕಾರ್ಯಗತಗೊಳಿಸಲಿ ಎಂದು ತಿಳಿಸಿದರು.

ಜುಲೈ 25ರೊಳಗೆ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಅಧ್ಯಕ್ಷರು ಬರೆದುಕೊಟ್ಟಿದ್ದರಿಂದ ತೃಪ್ತರಾದ ಧರಣಿ ನಿರತರು ಪ್ರತಿಭಟನೆ ಕೈಬಿಟ್ಟರು. ಉಪಾಧ್ಯಕ್ಷ ಟಿ.ಎನ್.ಪ್ರಕಾಶ್, ಬಹುತೇಕ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.