ADVERTISEMENT

ಸಿದ್ದಗಂಗಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಂಧಲೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 4:05 IST
Last Updated 21 ಮಾರ್ಚ್ 2012, 4:05 IST

ತುಮಕೂರು: ನಗರದ ಸಿದ್ದಗಂಗಾ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಮಂಗಳವಾರ ಕಾಲೇಜಿನಲ್ಲಿ ದಾಂಧಲೆ ನಡೆಸಿದ್ದಾರೆ.ತರಗತಿಯಿಂದ ಗುಂಪುಗುಂಪಾಗಿ ಕೊಠಡಿಗಳಿಂದ ಹೊರ ಬಂದ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಕೈಗೆ ಸಿಕ್ಕ ಹೂವಿನ ಕುಂಡಗಳನ್ನು ಎತ್ತಿ ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದರು.

ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಆಯೋಜನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರ ನಡುವೆ ಮಾತಿಗೆಮಾತು ಬೆಳೆದು ಪರಿಸ್ಥಿತಿ ಕೈಮೀರಿತು ಎಂದು ಹೇಳಲಾಗಿದೆ.

ಸಮಾರಂಭ ನಡೆಸಲು ಸಭಾಂಗಣ ಕೊಡುವಂತೆ ವಿದ್ಯಾರ್ಥಿಗಳು ಕೇಳಿದ್ದಾರೆ. ಆದರೆ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಸಭಾಂಗಣ ಕೊಡಲು ಸಾಧ್ಯವಿಲ್ಲ. ತರಗತಿ ಕೊಠಡಿಯಲ್ಲೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ಸಭಾಂಗಣ ಬೇಕೆಬೇಕು ಎಂದು ಪಟ್ಟುಹಿಡಿದ ವಿದ್ಯಾರ್ಥಿಗಳು ಅಂತಿಮವಾಗಿ ದಾಂಧಲೆ ಮಾಡತೊಡಗಿದರು. ಕಾಲೇಜಿನ ನೋಟಿಸ್ ಬೋರ್ಡ್ ಪುಡಿಪುಡಿ ಮಾಡಿದರು. ಹೂವು, ಅಲಂಕಾರಿಕಾ ಗಿಡಗಳ ಕುಂಡಗಳನ್ನು ಚೂರು ಚೂರು ಮಾಡಿದರು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪ್ರಾಂಶುಪಾಲರು ಕೂಡಲೇ ತಿಲಕ್ ಪಾರ್ಕ್ ಪೊಲೀಸರಿಗೆ ದೂರವಾಣಿ ಕರೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ವಿಭಾಗದ ಮುಖ್ಯಸ್ಥರ ಚಿತಾವಣೆಯೇ ಘಟನೆಗೆ ಕಾರಣ ಎಂದು ಪ್ರಾಂಶುಪಾಲ ವೈದೇಶ್ವರ ಸ್ಥಳದಲ್ಲಿದ್ದ ಸುದ್ದಿಗಾರರಿಗೆ ತಿಳಿಸಿದರು.

ವಿಭಾಗದ ಮುಖ್ಯಸ್ಥ ಜೈಸ್ವಾಮಿ ಅವರೊಂದಿಗೆ ಮಾತನಾಡಿದ ಪೊಲೀಸರು, ವಿದ್ಯಾರ್ಥಿಗಳನ್ನು ಸುಮ್ಮನಿರಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಆಗ ಜೈಸ್ವಾಮಿ ವಿದ್ಯಾರ್ಥಿಗಳ ಮನವೊಲಿಸಿ ಕಾಲೇಜು ಆವರಣದಿಂದ ಹೊರ ಕಳುಹಿಸಿದರು.ಘಟನೆಯಲ್ಲಿ ದ್ವಿಚಕ್ರ ವಾಹನವೊಂದು ಜಖಂಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.