ಶಿರಾ ತಾಲ್ಲೂಕಿನ ಹಳ್ಳಿಗಳಲ್ಲಿ ಗೌರಮ್ಮ- ಕೊಂತಮ್ಮನ ವಿಶಿಷ್ಟ ಆಚರಣೆಗಳು ಜರುಗುತ್ತಿವೆ. ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಈ ಜನಪದೀಯ ಧಾರ್ಮಿಕ ಆಚರಣೆಗೆ ‘ಹುಡುಗಿಯರ ಗೌರಿ’ ಅಂತಲೂ ಕರೆಯುತ್ತಾರೆ. ಏಕೆಂದರೆ ಈ ಆಚರಣೆಯಲ್ಲಿ ಅವಿವಾಹಿತ ಹುಡುಗಿಯರದೇ ಪ್ರಮುಖ ಪಾತ್ರವಾಗಿರುತ್ತದೆ.
ಗೌರಿ ಕೂರಿಸುವ ಮೂರು ದಿನಕ್ಕೆ ಮುಂಚೆ ಹಳ್ಳಿಯ ಹರೆಯದ ಹುಡುಗಿಯರೆಲ್ಲ ಒಂದೆಡೆ ಸೇರಿ, ಗುಂಡುಕಲ್ಲು ಕುಟ್ಟುವ ಶಾಸ್ತ್ರ ಮಾಡುತ್ತಾರೆ. ಆ ನಂತರ ಕುಂಬಾರರು ತಮ್ಮ ಮನೆಯಲ್ಲಿ ಮಣ್ಣಿನಿಂದ ಮಾಡಿ, ಬಣ್ಣ ಹಾಕಿ ಅಲಂಕರಿಸಿದ ಗೌರಿ ಮತ್ತು ಬಸವ (ದನ) ಪ್ರತಿಮೆಯನ್ನು ಖರೀದಿಸಿ ತಂದು ಊರಿನ ದೇವಸ್ಥಾನ, ಇಲ್ಲವೇ ಯಾರದಾದರೂ ಮನೆಯ ಹಜಾರದಲ್ಲಿ ಪ್ರತಿಷ್ಠಾಪಿಸುತ್ತಾರೆ.
ಅಂದರೆ ಬಸವನ ಮೇಲೆ ಗೌರಿಯನ್ನು ಕೂರಿಸಿ ಸೀರೆ ಉಡಿಸಿ ಆಕರ್ಷಕವಾಗಿ ಕಾಣುವಂತೆ ಮಾಡಿ ಪೂಜಿಸುತ್ತಾರೆ. ಹೀಗೆ ಪ್ರತಿಷ್ಠಾಪಿಸಿದ ಗೌರಮ್ಮನಿಗೆ ಪ್ರತಿ ದಿನ ಸಂಜೆ ಹುಡುಗಿಯರು ಹಾಡಿನೊಂದಿಗೆ ಪೂಜಿಸುತ್ತಾರೆ. ಅಲ್ಲಿಗೆ ಬಂದವರಿಗೆ ಫಲಾಹಾರ ಹಂಚುತ್ತಾರೆ. ಗ್ರಾಮದ ಹುಡುಗಿಯರ ಇಚ್ಛಾನುಸಾರ ಮೂರು, ಐದು ಇಲ್ಲವೇ ಒಂಬತ್ತು ದಿನಗಳವರೆಗೆ ಪೂಜಿಸುವುದು ರೂಢಿ.
ಗೌರಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಮುನ್ನಾ ದಿನ ಹುಡುಗಿಯರೆಲ್ಲ ಒಂದೆಡೆ ‘ಬಾನ’ ಎಂದು ಸಿಹಿ ಅಡುಗೆ ಮಾಡಿ, ತಾವು ಸವಿದು ಬಂದವರಿಗೂ ಉಣಬಡಿಸುತ್ತಾರೆ. ಮಾರನೇ ಸಂಜೆ ಹುಡುಗಿಯರೇ ಮೆರವಣಿಗೆಯಲ್ಲಿ ಗೌರಿಯನ್ನು ಹೊತ್ತು ಸಾಗಿ ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ. ಆ ರಾತ್ರಿ ಊರಿನಲ್ಲಿ ಸಿಹಿ ಅಡುಗೆ ಹಬ್ಬ ಮಾಡಲಾಗುತ್ತದೆ.
ಕೊಂತಮ್ಮ: ಗೌರಿ ವಿಸರ್ಜನೆ ಮಾಡುವ ಸಂಜೆಯೇ ಅಗಸರು ಮಣ್ಣಿನಲ್ಲಿ ಮಾಡಿಟ್ಟ ಬಣ್ಣದ ಅಲಂಕಾರ ಇಲ್ಲದ ಕೊಂತಮ್ಮನ ಪ್ರತಿಮೆ ತಂದು, ಪ್ರತಿಷ್ಠಾಪಿಸಲಾಗುತ್ತದೆ. ಕೊಂತಮ್ಮನಿಗೂ ಒಂದು ದಿನ ಪೂಜೆ ಸಲ್ಲಿಸಿ, ಮಾರನೇ ಸಂಜೆ ಮೆರವಣಿಗೆಯಲ್ಲಿ ಸಾಗಿ, ಪ್ರತಿಮೆಯನ್ನು ತಂಗಟೆ ಗಿಡ ಇಲ್ಲವೇ ಅವರೆ ಗಿಡದ ಬುಡದಲ್ಲಿಟ್ಟು ಬರಲಾಗುತ್ತದೆ. ಕೊಂತಮ್ಮನ ಕಳುಹಿಸುವ ದಿನ ಹಂದಿ ಅಥವಾ ಕೋಳಿ ಮಾಂಸದ ಅಡುಗೆಯನ್ನೇ ಮಾಡುತ್ತಾರೆ.
ರೊಟ್ಟಿ: ಕೊಂತಮ್ಮನ ಕಳುಹಿಸುವಾಗ ಗ್ರಾಮದ ಮಧ್ಯೆ ಕೆಲ ಹೊತ್ತು ಪ್ರತಿಷ್ಠಾಪಿಸುತ್ತಾರೆ. ಅಲ್ಲಿಗೆ ಗ್ರಾಮದ ಹುಡುಗಿಯರು ತಮ್ಮ ಮನೆಗಳಲ್ಲಿ ಮಾಡಿದ ಸಜ್ಜೆ, ಕೊರಲೆ ರೊಟ್ಟಿಗಳನ್ನು ತಂದು, ಒಂದೆಡೆ ಗುಡ್ಡೆ ಹಾಕುತ್ತಾರೆ. ಆಗ ಅಲ್ಲಿ ಸೇರಿದ ಗ್ರಾಮದ ಕೈವಾಡಸ್ತರಾದ ಮಡಿವಾಳ, ಮಣೆಗಾರ, ಛಲವಾದಿ, ತಳವಾರ ಸಮುದಾಯದವರು ಆ ರೊಟ್ಟಿಗಳನ್ನು ಲೆಕ್ಕ ಹಾಕಿ, ಪರಸ್ಪರ ಸಮನಾಗಿ ಹಂಚಿಕೊಂಡು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ.
ಕೋಲು ಒಯ್ಯುವುದು: ಗಣೇಶ ಹಬ್ಬದ ಸಮಯದಲ್ಲಿ ಹುಡುಗರು ರಸ್ತೆಯಲ್ಲಿ ಚಂದಾ ವಸೂಲಿ ಮಾಡುವುದು ಮಾಮೂಲಿ. ಆದರೆ ಗೌರಮ್ಮ-ಕೊಂತಮ್ಮನ ಪ್ರತಿಷ್ಠಾಪನೆಗೆ ಹುಡುಗಿಯರು ಚಂದಾ ವಸೂಲಿ ಮಾಡುವ ರೀತಿ ಮಾತ್ರ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿದೆ. ಅಂದರೆ, ಗ್ರಾಮದಲ್ಲಿ ಮದುವೆಯಾದ ಹುಡುಗ, ಇಲವೇ ಗ್ರಾಮದ ಹುಡುಗಿಯನ್ನು ಮದುವೆಯಾದ ಅಳಿಯ ಹಾಗೂ ಗ್ರಾಮಕ್ಕೆ ಬರುವ ಹೊಸಬರಿಗೆ ಗ್ರಾಮದ ಹುಡುಗಿಯರೆಲ್ಲ ಸೇರಿ ಆರತಿ ಬೆಳಗಿ, ಸಿಹಿ ಕೊಟ್ಟು ಹಾಡು ಹೇಳಿ ಮಂಗಳಾರತಿ ತಟ್ಟೆಗೆ ಹಣ ಹಾಕುವಂತೆ ಕೇಳುತ್ತಾರೆ. ಇದನ್ನು ‘ಕೋಲು ಒಯ್ಯುವುದು’ ಎಂತಲೂ ಕರೆಯುತ್ತಾರೆ. ಹೀಗೆ ಕೋಲು ಒಯ್ಯುವುದರಿಂದ ಸಂಗ್ರಹವಾದ ಹಣವನ್ನು ಗೌರಮ್ಮ-ಕೊಂತಮ್ಮನ ಪೂಜೆ- ಮೆರವಣಿಗೆ ನಿರ್ವಹಣೆಗೆ ಬಳಸುತ್ತಾರೆ.
ಸೀರೆ ನೀರೆಯರು: ಗೌರಮ್ಮ-ಕೊಂತಮ್ಮನ ವಿಸರ್ಜನೆ ವೇಳೆಗೆ ನಡೆಯುವ ಮೆರವಣಿಗೆಯಲ್ಲಿ ಗ್ರಾಮದ ಚೋಟು ಹುಡುಗಿಯರೆಲ್ಲ ಸೀರೆ ಉಡುವುದು ವಿಶೇಷ. ಅಂದರೆ ನಾಲ್ಕು ವರ್ಷದ ಹುಡುಗಿಯಿಂದ ಹಿಡಿದು ಹರೆಯದ ಹುಡುಗಿಯರೆಲ್ಲರೂ ಸೀರೆ ಉಟ್ಟು ಅಲಂಕಾರ ಮಾಡಿಕೊಳ್ಳುತ್ತಾರೆ.
ಹುಡುಗರ ಕೀಟಲೆ: ಸೀರೆಯುಟ್ಟು ಅಲಂಕಾರ ಮಾಡಿಕೊಂಡ ಹುಡುಗಿಯರನ್ನು ಕಿಚಾಯಿಸಲೆಂದೇ ಹುಡುಗರ ದಂಡು ಮೆರವಣಿಗೆ ಅಕ್ಕ ಪಕ್ಕದಲ್ಲಿ ಸೇರುತ್ತದೆ. ಈ ಹುಡುಗರು ಪಟಾಕಿ ಹೊಡೆಯುತ್ತಾರೆ. ಅಲ್ಲದೆ ತಮ್ಮ ನೆಂಟರ ಹುಡುಗಿಯರಿಗೆ ಹುಡುಗರು ಪಟ್ಲುಗೋವಿಯಿಂದ ಬಾರೇ ಕಾಯಿ ಗುಂಡು ಹೊಡೆಯುತ್ತಾರೆ. ಇಲ್ಲವೇ ಕೈಯಿಂದ ಬೆನ್ನಿಗೆ ಎಸೆಯುತ್ತಾರೆ. ಅದರ ಪೆಟ್ಟಿನಿಂದ ಹುಡುಗಿಯರು ಹುಸಿ ಕೋಪ ತೋರುತ್ತಾರೆ. ಆಗ ಗ್ರಾಮದ ಹಿರಿಯರು ಹುಡುಗರನ್ನು ಪೋಲಿಗಳೆಂದು ಗದರಿಸಿ ಓಡಿಸುತ್ತಾರೆ.
ಅಕ್ಕಪಕ್ಕದ ತಾಲ್ಲೂಕುಗಳ ಹಳ್ಳಿಗಳನ್ನು ಹೊರತುಪಡಿಸಿ ಬೇರೆಡೆ ಅಷ್ಟೊಂದು ಪ್ರಚಲಿತದಲ್ಲಿ ಇಲ್ಲದ ಈ ಗೌರಿ-ಕೊಂತಮ್ಮ ಆಚರಣೆ ಬಹು ಹಿಂದಿನಿಂದಲೂ ಶಿರಾ ತಾಲ್ಲೂಕಿನಲ್ಲಿ ನಡೆದು ಬರುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮೊದಲಿನ ಆಕರ್ಷಣೆ ಇಲ್ಲದೆ ಕಳೆಗುಂದುತ್ತಿರುವುದು ಕಂಡು ಬರುತ್ತಿದೆ.
***
ಗುಂಡುಕಲ್ಲು ಕುಟ್ಟಿದರೆ ಮದುವೆ!
ಗೌರಮ್ಮನ ಪ್ರತಿಷ್ಠಾಪನೆಗೆ ಮುನ್ನ ಹುಡುಗಿಯರು ಒಂದೆಡೆ ಸೇರಿ, ಗುಂಡು ಕಲ್ಲು ಕುಟ್ಟುವ ಶಾಸ್ತ್ರ ಮಾಡುತ್ತಾರೆ. ಈ ವೇಳೆ ಪ್ರಾಯಕ್ಕೆ ಬಂದ ಹುಡುಗಿಯರು ಗುಂಡು ಕಲ್ಲು ಕುಟ್ಟಿದರೆ ಮುಂದಿನ ವರ್ಷದ ಗೌರಮ್ಮ ಹಬ್ಬ ಬರುವುದರೊಳಗೆ ಅವರ ಮದುವೆಯಾಗುತ್ತದೆ ಎಂಬ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.