ADVERTISEMENT

ಹಕ್ಕುಪತ್ರ: ಪ್ರಾಣತ್ಯಾಗದ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 7:04 IST
Last Updated 17 ಡಿಸೆಂಬರ್ 2013, 7:04 IST

ತುರುವೇಕೆರೆ: ನಿವೇಶನದ ಹಕ್ಕುಪತ್ರ ನೀಡದ ಕಾರಣ ನಾಲ್ಕು ದಶಕಗಳಿಂದ ಕೊಡಗೀಹಳ್ಳಿ ಗ್ರಾಮಠಾಣಾ ವ್ಯಾಪ್ತಿಯಲ್ಲಿನ ಗುಡಿಸಲುಗಳಲ್ಲಿ ವಾಸವಿರುವ 4 ದಲಿತ ಕುಟುಂಬಗಳು ತಮಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಪ್ರಾಣತ್ಯಾಗ ಮಾಡುವುದಾಗಿ ಬೆದರಿಕೆ ಹಾಕಿ ಪ್ರತಿಭಟನೆ ನಡೆಸಿದವು.

ಕೊಡಗೀಹಳ್ಳಿ ಹೈಸ್ಕೂಲ್ ಹಿಂಭಾಗ­ದಲ್ಲಿ 4 ದಶಕಗಳಿಂದ ಗುಡಿಸಲು ಹಾಕಿಕೊಂಡು ವಾಸವಿದ್ದೇವೆ. ಸರ್ಕಾರ ವಾಸಸ್ಥಳದ ದೃಢೀಕರಣ ಪತ್ರ ನೀಡಿದೆ. ಅಷ್ಟೇ ಅಲ್ಲ, ಇದೇ ವಿಳಾಸವನ್ನು ದಾಖಲಿಸಿ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಲಾಗಿದೆ. ಬಡತನದ ರೇಖೆಯ ಕೆಳಗಿರುವ ನಾವೆಲ್ಲರೂ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಎರಡು ಕುಟುಂಬಗಳಲ್ಲಿ ವಿಧವೆಯರೇ ಕುಟುಂಬದ ಜವಾಬ್ಧಾರಿ ಹೊತ್ತಿ­ದ್ದಾರೆ. ಇನ್ನೆರಡು ಕುಟುಂಬ­ಗಳಲ್ಲಿ ವೃದ್ಧರು ನೊಗ ಹೊತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಗುಡಿಸಲುಗಳ ಪಕ್ಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಾಮಗಾರಿ ಆರಂಭವಾಗಿನಿಂದ ನಮ್ಮ ಅಸ್ತಿತ್ವವೇ ಅಲುಗಾಡಲಾರಂಭಿಸಿದೆ. ‘ನಾವು ಜಾಗ ಕೇಳ್ತೀವಿ ಅಂತ ನಮ್ ಪಡಿತರ ಚೀಟಿ ಕಿತ್ತು ಮಡಿಕ್ಕಂಡವ್ರೆ.. ವರ್ಷ­ಗಳಿಂದ ಇಲ್ಲೇ ಬಾಳಿ ಬದುಕಿದ್ದೇವೆ. ಅರ್ಧ ಜೀವ ಸವೆಸಿದ್ದೇವೆ. ಈಗ ಬಿಟ್ಟೋಗು ಅಂದ್ರೆ ಎಲ್ಲಿಗೆ ಓಗೋದು? ಓಟು ಕೇಳಕ್ಕೆ ಬಂದೋರೆಲ್ಲಾ ಹಕ್ಕುಪತ್ರ ಕೊಡುಸ್ತೀವಿ ಅಂತ ಸುಳ್ಳು ಯೋಳ್ಕಂಡೇ ಬಂದವ್ರೆ..ಇನ್ನೊಂದು ಜಾಗ ತೋರ್ಸಗಂಟ ಇಲ್ಲಿಂದ ಓಗಕಿಲ್ಲ. ಬೇಕಾರೆ ನನ್ ಪ್ರಾಣ ಓಗ್ಲಿ’ ಎಂದು ವಯೋವೃದ್ಧೆ ತುಳಸಮ್ಮ ಕಣ್ಣೀರು ಹಾಕಿದರು.

ದಲಿತ ಕುಟುಂಬಳಿಗೆ ಸೇರಿದ ರಾಜಣ್ಣ, ಸುಜಾತ, ತಿಮ್ಮಮ್ಮ, ನರಸಿಂಹಮೂರ್ತಿ, ಸಾವಿತ್ರಮ್ಮ, ರಂಗಯ್ಯ, ಕೃಷ್ಣಪ್ಪ, ಭಾಗ್ಯಮ್ಮ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.