ADVERTISEMENT

ಹಾಡು, ನಾಟಕ ಮೂಲಕ ಶಿಕ್ಷಣ ಜಾಥಾ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 6:10 IST
Last Updated 17 ಫೆಬ್ರುವರಿ 2012, 6:10 IST

ಶಿಡ್ಲಘಟ್ಟ: `ನಿಮ್ಮೂರು ನಮ್ಮೂರಂಗೈತೆ, ನಿಮ್ಮೂರಿನಾಗ ನಮ್ಮೂರಾಂಗ ಶಾಲೆ ಒಂದೈತೆ, ಊರ ಒಳಗಿನ ಶಾಲೆ ಮಾತ್ರ ಇನ್ನೂ ಯಾಕೆ ಅಂಗೈತಣ್ಣ~  ಎಂದು ರಾಗಬದ್ದವಾಗಿ ತಬಲಾ ಮತ್ತು ತಮಟೆಯ ಸದ್ದಿನೊಂದಿಗೆ ಹಾಡುತ್ತಿದ್ದರೆ ವಿದ್ಯಾರ್ಥಿಗಳು ದನಿಗೂಡಿಸಿದ್ದರು.

ಪಟ್ಟಣದ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಮುದಾಯ ಮತ್ತು ಪೋಷಕರಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಒಲವು ಮೂಡಿಸಲು ಕಲಾ ಜಾಥ ಪ್ರದರ್ಶನವನ್ನು ಆಯೋಜಿಸ ಲಾಗಿತ್ತು.

ಜಿಲ್ಲಾಮಟ್ಟದ ಕಲಾವಿದರ ತಂಡವು ಜಾಗೃತಿ ಗೀತೆಗಳು ಮತ್ತು ನಾಟಕದ ಮೂಲಕ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪೋಷಕರು ಮತ್ತು ಸಾರ್ವ ಜನಿಕರಲ್ಲಿ ಅರಿವು ಮೂಡಿಸಿದರು.

 `ಶಾಲೆಗೆ ಹೋಗೋಣ ಬನ್ನಿ ಶಾಲೆಗೆ ಹೋಗೋಣ, ಸಮುದಾಯವೇ ಶಾಲೆಗೆ ಬಂದು ನೋಡಿ ಶಾಲಾ ಪರಿಸ್ಥಿತಿ ಸುಧಾರಿಸಲು~ ಎಂಬ ಗೀತೆ, ಕುಡುಕ ತಂದೆ ಮತ್ತು ಹೆಣ್ಣು ಮಗುವಿನ ಪಾತ್ರಗಳಿರುವ `ಬಾಡದ ಚಿಗುರು~ ನಾಟಕವನ್ನು ಪ್ರದರ್ಶಿಸಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಇತರೆ ಸಾರ್ವಜನಿಕರಿಗೆ ಮಕ್ಕಳನ್ನು ಶಾಲೆಗೆ ಕರೆ ತನ್ನಿ, ಶಿಕ್ಷಣ ನೀಡಿ ಎಂದು ವಿನಂತಿಸಿದರು.

ನಂತರ ಶಾಲಾಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಕಲಾ ತಂಡದ ಸದಸ್ಯರು ಶಾಲೆಯಿಂದ ಹೊರ ಗುಳಿದಿರುವ ಮಕ್ಕಳ ಮನೆಗಳಿಗೆ ತೆರಳಿ ಶಾಲೆಗೆ ಕಳುಹಿಸುವಂತೆ ಮನವೊಲಿಸಿದರು.

 `ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಕಲಾ ತಂಡವು ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಮತ್ತು ಶಾಲೆಯಿಂದ ಹಿಂದುಳಿದ ಮಕ್ಕಳಿರುವ ಪ್ರದೇಶಗಳಲ್ಲಿ ಸಂಗೀತ, ರೂಪಕ ಮತ್ತು ನಾಟಕಗಳ ಮೂಲಕ 6 ರಿಂದ 14 ವರ್ಷದ ಎಲ್ಲಾ ಮಕ್ಕಳನ್ನು ಶಾಲೆಗಳಲ್ಲಿ ದಾಖಲಿಸುವಂತೆ ಮಾಡುತ್ತಿದ್ದೇವೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೂ ಈ ಬಗ್ಗೆ ತಿಳಿ ಹೇಳಿ ಅವರ ಕರ್ತವ್ಯಗಳನ್ನೂ ತಿಳಿಸಿಕೊಡುತ್ತಿದ್ದೇವೆ.

ಈ ದಿನ ಶಿಡ್ಲಘಟ್ಟದಲ್ಲಿ ನಾಲ್ಕು ಮಕ್ಕಳನ್ನು ಶಾಲೆಗೆ ಸೇರಿಸಲು ಸಫಲರಾದೆವು~ ಎಂದು ಕಲಾತಂಡದ ಸದಸ್ಯ ಶಿಕ್ಷಕ ನಾಗರಾಜ್ ತಿಳಿಸಿದರು.

ಇದೇ ವೇಳೆ ಜಿಲ್ಲಾ ಕಲಾ ತಂಡದ ಸದಸ್ಯರಾದ ಸೀತಕಲ್ ರಾಮ ಚಂದ್ರ, ಮಹಮ್ಮದ್ ಹನೀಫ್, ಕೆ.ವಿ.ಬಾಲಕೃಷ್ಣ, ನಾರಾಯಣಸ್ವಾಮಿ, ಭಾಗ್ಯಲಕ್ಷ್ಮಿ, ವಿಜಯಲಕ್ಷ್ಮಿ, ಜಯಲಕ್ಷ್ಮೀ, ನರಸಿಂಹಮೂರ್ತಿ, ಸಿಆರ್‌ಪಿ ಷಹನವಾಜ್, ಎಚ್.ವಿ.ವೆಂಕಟರೆಡ್ಡಿ, ಮುಖ್ಯ ಶಿಕ್ಷಕ ಮತ್ತು ಸಿಬ್ಬಂದಿ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಶ್ರೀನಿವಾಸ್, ಮುನಿಯಮ್ಮ, ದ್ಯಾವಮ್ಮ ಕಾರ್ಯ ಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.