ADVERTISEMENT

ಹಿರೇಹಳ್ಳಿ ಸಮೀಪ ಆನೆಗಳ ಹಿಂಡು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:06 IST
Last Updated 19 ಡಿಸೆಂಬರ್ 2012, 11:06 IST

ತುಮಕೂರು: ತಾಲ್ಲೂಕಿನ ಹಿರೇಹಳ್ಳಿ ಸಮೀಪಕ್ಕೆ ಮಂಗಳವಾರ ಬೆಳಿಗ್ಗೆ 6 ಆನೆಗಳ ಹಿಂಡು ಬಂದಿದ್ದು, ಸಣ್ಣಪ್ಪನಪಾಳ್ಯದ ಕೆರೆಯಲ್ಲಿ ಬೀಡು ಬಿಟ್ಟಿವೆ. ನೆಲಮಂಗಲ ಕಡೆಯಿಂದ ಶಿವಗಂಗೆ ಸಮೀಪದ ಬೆಟ್ಟಗುಡ್ಡಗಳಿಗೆ ತಲುಪಿದ್ದ ಆನೆಗಳು ಮಂಗಳವಾರ ಬೆಳಿಗ್ಗೆಯೇ ಇತ್ತ ಕಡೆಗೆ ಆಗಮಿಸಿವೆ.

ಆನೆಗಳು ಬಂದಿರುವ ಸುದ್ದಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆ, ಪೊಲೀಸ್ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ಆ ನಂತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.ಸಣ್ಣಪ್ಪನಪಾಳ್ಯದ ಕೆರೆಯಲ್ಲಿ ಎತ್ತರವಾದ ಒಡಕೆ ಹುಲ್ಲಿನಕಡ್ಡಿ ಬೆಳೆದಿದ್ದು, ಆನೆಗಳು ಇಲ್ಲಿ ಸೇರಿವೆ.

ಆದರೆ ಆನೆಗಳು ಬೆಳೆ ಹಾನಿ ಸೇರಿದಂತೆ ಯಾವುದೇ ದಾಳಿಗೆ ಇಳಿದಿಲ್ಲ. ಆನೆ ಗುಂಪಿನಲ್ಲಿ 2 ಮರಿ ಆನೆಗಳು ಇರುವುದರಿಂದ ಗ್ರಾಮಸ್ಥರು ಗಲಾಟೆ ಮಾಡದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯುತ್ತಿದ್ದಾರೆ. ಗಲಾಟೆ ಎಬ್ಬಿಸಿದರೆ ಆನೆಗಳು ತಿರುಗಿಬೀಳುವ ಆಪಾಯವಿರುವುದರಿಂದ ಎಲ್ಲರನ್ನೂ ಸ್ಥಳದಿಂದ ತೆರಳುವಂತೆ ಸೂಚಿಸಿಸುತ್ತಿದ್ದಾರೆ. ಆದರೂ ಕೆಲವು ಕುತೂಹಲಿಗಳ ಗುಂಪು ಅಲ್ಲಿಂದ ಕದಲುತ್ತಿಲ್ಲ.

ಹಗಲು ಸಮಯದಲ್ಲಿ ಆನೆಗಳನ್ನು ಇಲ್ಲಿಂದ ಓಡಿಸಲು ಸಾಧ್ಯವಿಲ್ಲ. ಹೀಗಾಗಿ ರಾತ್ರಿಯಾಗುವುದನ್ನು ಕಾಯುತ್ತಿದ್ದೇವೆ. ರಾತ್ರಿ ಪಟಾಕಿ ಹಚ್ಚಿ ಆನೆಗಳನ್ನು ಓಡಿಸುತ್ತೇವೆ. ಆದಷ್ಟು ಸಾವನದುರ್ಗ ಬೆಟ್ಟದ ಕಡೆ ಓಡಿಸಬೇಕು ಎಂದು ಕೊಂಡಿದ್ದೇವೆ ಎಂದು ಆರ್‌ಎಫ್‌ಒ ಚಿನ್ನಪ್ಪ ತಿಳಿಸಿದರು.

ಪ್ರತಿ ವರ್ಷ ಇದೇ ಸಮಯಕ್ಕೆ ಆನೆಗಳ ಗುಂಪು ಈ ಭಾಗಕ್ಕೆ ದಾಳಿ ಇಡುತ್ತಿದ್ದು, ಬೆಳೆಯನ್ನು ನಾಶ ಮಾಡುತ್ತಿದ್ದವು. ಈ ವರ್ಷ 6 ಆನೆಗಳು ಬಂದಿವೆ. ಅಲ್ಲದೆ ಇದು ಬೆಂಗಳೂರು- ತುಮಕೂರು ಜಿಲ್ಲೆ ಗಡಿ ಆಗಿರುವುದರಿಂದ ಆನೆಗಳನ್ನು ಅತ್ತಲಿಂದ ಇತ್ತ ಕಡೆಗೆ, ಮತ್ತೆ ಅತ್ತ ಕಡೆಗೆ ಓಡಿಸುವ ಕೆಲಸ ನಡೆಯುತ್ತಿದೆ. ಸೋಮವಾರ ಸಹ ನೆಲಮಂಗಲದಿಂದ ತುಮಕೂರು ಜಿಲ್ಲೆಯ ಗಡಿಗೆ ಓಡಿಸಿ ಅಲ್ಲಿನ ಅರಣ್ಯಾಧಿಕಾರಿಗಳು ಕೈತೊಳೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.