ADVERTISEMENT

ಹೆಚ್ಚಿದ ಬಡವರು, ಕಾರ್ಮಿಕರ ಶೋಷಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 8:20 IST
Last Updated 11 ಜುಲೈ 2012, 8:20 IST

ತುಮಕೂರು: ಬಡವರು, ಕಾರ್ಮಿಕರು, ನಿಸ್ಸಾಹಾಯಕರ ಮೇಲಿನ ಶೋಷಣೆ ಹೆಚ್ಚಾಗಿದೆ. ಜತೆಗೆ ಭ್ರಷ್ಟರ ಪೋಷಣೆ ಮಾಡಲಾಗುತ್ತಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತಸುಬ್ಬರಾವ್ ಹೇಳಿದರು.

ನಗರದಲ್ಲಿ ಭಾನುವಾರ ಭಾರತ ಕಮ್ಯೂನಿಸ್ಟ್ ಪಕ್ಷದ ಕಚೇರಿಯಲ್ಲಿ ನಡೆದ ಎಐಟಿಯುಸಿ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದರು.ರಾಜ್ಯದಲ್ಲಿ ರಾಜಕೀಯ ಅರಾಜಕತೆ ತಾಂಡವಾಡುತ್ತಿದೆ. ರಾಜ್ಯದ ಹೊಣೆಹೊತ್ತ ಆಳುವ ವರ್ಗದ ಜನ ಸ್ವಹಿತಾಸಕ್ತಿಯ ರಾಜಕಾರಣದಲ್ಲಿ ತೊಡಗಿಕೊಂಡು ರೈತರು, ಕಾರ್ಮಿಕರ ಸಮಸ್ಯೆ ಮರೆತಿದ್ದಾರೆ ಎಂದರು.

ಶತಮಾನೋತ್ಸವ ಆಚರಣೆಯ ಹಂತದಲ್ಲಿರುವ ದೇಶದ ಏಕೈಕ ಕಾರ್ಮಿಕ ಸಂಘಟನೆ ಎಐಟಿಯುಸಿ ಆಗಿದೆ. ದೇಶದಲ್ಲಿ 45 ಲಕ್ಷ ಕಾರ್ಮಿಕರು ಎಐಟಿಯುಸಿ ಸದಸ್ಯರಾಗಿದ್ದಾರೆ. ಕಾರ್ಮಿಕರ ಪರ ಹೋರಾಟವೇ ಸಂಘ ಹಂತಕ್ಕೆ ಬೆಳೆಯಲು ಕಾರಣ ಎಂದರು.

ಜುಲೈ 10ರಂದು ಕಾರ್ಮಿಕರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಎಐಟಿಯುಸಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಮಾಯಾಜಿಂಕೆಯಂತೆ ಯಾರ ಕೈಗೂ ಸಿಗದೆ ಓಡುತ್ತಿದೆ. ಆರ್ಥಿಕತೆ ದಿವಾಳಿತನದ ಅಂಚಿನದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ವಿಜಯಕುಮಾರ್, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕಂಬೇಗೌಡ, ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ, ಗೌಡರಂಗಪ್ಪ, ಚಿನ್ನಪ್ಪ, ಚಂದ್ರಶೇಖರ್ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.