ADVERTISEMENT

‘ಹುಷಾರ್‌, ನಿಮ್ಮ ಇತಿಹಾಸ ಬಿಚ್ಚಿಡಬೇಕಾಗುತ್ತದೆ’

ಮುದ್ದಹನುಮೇಗೌಡರಿಗೆ ಬಸವರಾಜು ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 6:33 IST
Last Updated 22 ಮಾರ್ಚ್ 2014, 6:33 IST

ತುಮಕೂರು: ‘ನನ್ನ ಬಗ್ಗೆ ಅನಗತ್ಯ ಆರೋಪ ಮಾಡಿದರೆ, ಹುಷಾರ್‌. ನಿಮ್ಮ ಪೂರ್ವಾಶ್ರಮದ ಇತಿಹಾಸ ಬಿಚ್ಚಿಡಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇ­ಗೌಡ ಅವರಿಗೆ ಸಂಸದ ಜಿ.ಎಸ್‌.ಬಸವರಾಜು ಎಚ್ಚರಿಕೆ ನೀಡಿದರು.

‘ನನಗೆ ಇಂಗ್ಲಿಷ್‌ ಬರಲ್ಲ ಎಂದು ಹೇಳಿದ್ದಾರೆ. ಇಂಗ್ಲಿಷ್‌ ಬರುವವರು ಮಾತ್ರ ಸಂಸದರಾಗ­ಬೇಕು ಎಂದು ಸಂವಿಧಾನದಲ್ಲಿ ಇದೆಯೇ? ನ್ಯಾಯವಾದಿಯಾಗಿದ್ದ ವ್ಯಕ್ತಿಗೆ ಇಂತಹ ಸಾಮಾನ್ಯ ಜ್ಞಾನವೂ ಇಲ್ಲವೇ? ವೈಯಕ್ತಿಕ ನಿಂದನೆ ಮಟ್ಟಕ್ಕೆ ಇಳಿಯುವುದು ಸರಿಯಲ್ಲ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯೂ ಆಗುತ್ತದೆ’ ಎಂದು ಶುಕ್ರವಾರ ಪ್ರತಿಕಾಗೋಷ್ಠಿಯಲ್ಲಿ ಹೇಳಿದರು.

ಎಂ.ಡಿ.ಲಕ್ಷ್ಮೀನಾರಾಯಣ ಪಕ್ಷ ಬಿಟ್ಟು ಹೋಗುವುದಿದ್ದರೆ, ಸುಮ್ಮನೆ ಹೋಗಲಿ. ಯಡಿಯೂರಪ್ಪ ಅವರೊಂದಿಗೆ ಇದ್ದು, ಎಲ್ಲ ಅಧಿಕಾರವನ್ನು ಅನುಭವಿಸಿ ಈಗ ಕೆಸರು ಎರಚಾಡಿ ಹೊರ ಹೋಗುವುದು ಸರಿಯಲ್ಲ. ಲಕ್ಷ್ಮೀನಾರಾಯಣ್‌ ಯಾರು ಎಂಬುದು ಜನರಿಗೆ ಗೊತ್ತಾಗಿದ್ದೇ ಯಡಿಯೂರಪ್ಪ ಕೃಪಾಕಟಾಕ್ಷ­ದಿಂದ. ಲಕ್ಷ್ಮೀನಾರಾಯಣ್‌ಗೆ ಯಾವುದೇ ಸೈದ್ಧಾಂತಿಕ ನಿಲುವಿಲ್ಲ. ಈಗ ಕಾಂಗ್ರೆಸ್‌ನಲ್ಲಿ ಅಧಿಕಾರ ಸಿಗಬಹುದು ಎಂಬ ಕಾರಣಕ್ಕೆ ಹೋಗಿದ್ದಾರೆಂದು ಅವರು ಆಪಾದಿಸಿದರು.

ಎಂ.ಡಿ.ಲಕ್ಷ್ಮೀನಾರಾಯಣ ಕಾಂಗ್ರೆಸ್‌ಗೆ ಹೋಗಲು ಈ ಮೊದಲೇ ನಿರ್ಧರಿಸಿದ್ದರು. ಹೀಗಾಗಿ ನನ್ನ ಮತ್ತು ಧನಂಜಯಕುಮಾರ್‌ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದರು. ಸ್ವಾರ್ಥಕ್ಕಾಗಿ ಹೊರ ನಡೆದವರು ನನ್ನ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಅವರು ಟೀಕಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ನಂದೀಶ್‌ ಮಾತನಾಡಿ, ಜಿ.ಎಸ್.ಬಸವ­ರಾಜು ಮಾ.24ರಂದು ಬೆಳಿಗ್ಗೆ ನಾಮಪತ್ರ ಸಲ್ಲಿಸುವರು. ನಮ್ಮಲ್ಲಿ ಯಾವುದೇ ಭಿನ್ನಾಭಿ­ಪ್ರಾಯ­ವಿಲ್ಲ. ಪಕ್ಷದ ಟಿಕೆಟ್‌ಗೆ ಪ್ರಯತ್ನಿಸಿದ್ದರೂ, ಈಗ ಪಕ್ಷದ ಅಭ್ಯರ್ಥಿ ಪರ ಎಲ್ಲರೂ ಕೆಲಸ ಮಾಡುತ್ತೇವೆ. ಬೂತ್‌ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ, ಚುನಾವಣೆ ನಿರ್ವಹಣೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ, ಮಾಜಿ ಶಾಸಕ ಬಿ.ಸಿ.ನಾಗೇಶ್‌, ಮುಖಂಡರಾದ ಶಿವಪ್ರಸಾದ್‌, ರವಿ ಹೆಬ್ಬಾಕ, ಜ್ಯೋತಿ ಗಣೇಶ್‌, ಸಿ.ವಿ.ಮಹಾದೇವಯ್ಯ, ಮಂಜುನಾಥ್‌, ಸುಮಿತ್ರಾದೇವಿ, ಕೃಷ್ಣಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

‘ಕೆಪಿಸಿಸಿ ಅಧ್ಯಕ್ಷರೊಂದಿಗೆ ಒಳ ಒಪ್ಪಂದ’

ತುಮಕೂರು: ಎಂ.ಡಿ.ಲಕ್ಷ್ಮೀನಾರಾಯಣ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀ­ನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌ಗೆ ಸ್ಥಾನ ಬಿಟ್ಟು ಕೊಡುವುದಾಗಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಬಿಜೆಪಿ ಮುಖಂಡ ಲೋಕೇಶ್ವರ್‌ ಆಪಾದಿಸಿದರು.
ವಿಧಾನ ಪರಿಷತ್‌ ಸದಸ್ಯತ್ವ ಬಿಟ್ಟುಕೊಟ್ಟು, ತನ್ನ ರಿಯಲ್‌ ಎಸ್ಟೇಟ್‌ ಉದ್ಯಮವನ್ನು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಚುನಾವಣೆ ಮುಗಿದ ತಕ್ಷಣವೇ ಇದೆಲ್ಲ ನಡೆಯುತ್ತದೆ ಎಂದು ಅವರು ಹೇಳಿದರು.

ರಿಯಲ್‌ ಎಸ್ಟೇಟ್‌ ಏಜೆಂಟ್‌: ಎಂ.ಡಿ.ಲಕ್ಷ್ಮೀನಾರಾಯಣ ರಿಯಲ್‌ ಎಸ್ಟೇಟ್‌ ಏಜೆಂಟ್‌. ತಮ್ಮ ಮಗನೊಂದಿಗೆ ಸೇರಿ ಬೆಂಗಳೂರಿನ ಕೆಜೆಪಿ ಕಚೇರಿಯನ್ನು ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಬಳಕೆ ಮಾಡಲು ಮುಂದಾಗಿದ್ದರು.

ಇದನ್ನು ಅರಿತ ಯಡಿಯೂರಪ್ಪ ಕಚೇರಿ ಬಾಗಿಲು ಮುಚ್ಚಿಸಿದರು. ಇದರಿಂದ ಸಿಟ್ಟಿಗೆದ್ದ ಲಕ್ಷ್ಮೀನಾರಾಯಣ ಅವರು ಯಡಿಯೂರಪ್ಪ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರಿಂದ ಸಕಲ ಸೌಭಾಗ್ಯವನ್ನು ಅನುಭವಿಸಿ, ಈಗ ಸೇಡಿನ ಮಾತನಾಡುತ್ತಿದ್ದಾರೆಂದು ಅವರು ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT