ADVERTISEMENT

2 ದಿನಗಳಲ್ಲಿ ನಿರ್ಧಾರ ಪ್ರಕಟ: ಸಭೆಯಲ್ಲಿ ಕಣ್ಣೀರು

ಬಿಜೆಪಿ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 11:14 IST
Last Updated 18 ಏಪ್ರಿಲ್ 2018, 11:14 IST
ಕಾರ್ಯಕರ್ತರ ಸಭೆಯಲ್ಲಿ ಮುಖಂಡ ಕೆ.ಎಸ್.ಕಿರಣ್‌ಕುಮಾರ್ ಮಾತನಾಡಿದರು.
ಕಾರ್ಯಕರ್ತರ ಸಭೆಯಲ್ಲಿ ಮುಖಂಡ ಕೆ.ಎಸ್.ಕಿರಣ್‌ಕುಮಾರ್ ಮಾತನಾಡಿದರು.   

ಹುಳಿಯಾರು: ಮುಂದಿನ ಎರಡು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್.ಕಿರಣ್‌ಕುಮಾರ್‌ ತಿಳಿಸಿದರು.

ಪಟ್ಟಣದ ತಮ್ಮ ಒಡೆತನದ ವಿದ್ಯಾವಾರಿಧಿ ಶಾಲೆಯಲ್ಲಿ ಮಂಗಳವಾರ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಮನದಾಳದ ಮಾತನ್ನು ಹೊರಹಾಕಿದರು.

ರಾಜಕೀಯವಾಗಿ ತಮ್ಮನ್ನು ಮುಗಿಸಲು ಕಳೆದ 2 ವರ್ಷಗಳಿಂದ ಷಡ್ಯಂತ್ರ ನಡೆಯುತ್ತಿದೆ. ಈ ಹಿಂದೆ ನಮ್ಮ ಶಾಲೆಯಲ್ಲಿ ನಡೆದ ಕಹಿ ಘಟನೆ ನನಗೆ ಟಿಕೆಟ್ ಕೈತಪ್ಪಿದೆ. ನನ್ನ ಮೇಲಿನ ರಾಜಕೀಯ ದ್ವೇಷಕ್ಕೆ ನಮ್ಮ ಶಾಲೆಯ ಮಕ್ಕಳು ಬಲಿಯಾದರೆಂದು ಕಣ್ಣೀರು ಹಾಕಿದರು.

ADVERTISEMENT

ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಾಯ ಬರುತ್ತಿದೆ. ಆದರೆ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟ ಮಾಡುತ್ತೇನೆ. ಜಿಲ್ಲೆಯಲ್ಲಿ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಲಾಗಿದೆ. ತುಮಕೂರು ನಗರ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಲ್ಲಿ ವಲಸಿಗರಿಗೆ ಮಣೆ ಹಾಸಲಾಗಿದೆ ಎಂದರು.

ಸಭೆಯಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಚುನಾವಣೆಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯಿಸಿದರು.

ಟಿಕೆಟ್ ವಂಚಿತರು ಒಂದಾಗುವ ಬಗ್ಗೆ ಚರ್ಚೆ

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 2 ರಾಷ್ಟ್ರೀಯ ಪಕ್ಷಗಳಿಂದ ವಂಚಿತರಾಗಿರುವ ಅಭ್ಯರ್ಥಿಗಳು ಒಂದಾಗಿ ಒಬ್ಬರು ಸ್ಪರ್ಧೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ 4 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಟಿಕೇಟ್ ವಂಚಿತರಾಗಿರುವ ಸಾಸಲು ಸತೀಶ್ ಹಾಗೂ ಬಿಜೆಪಿಯ ಕೆ.ಎಸ್.ಕಿರಣ್‌ಕುಮಾರ್ ನಡುವೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಇಬ್ಬರು ನಾಯಕರು ತಮ್ಮ ಕಾರ್ಯಕರ್ತರ ಸಭೆಯನ್ನು ನಡೆಸಿದ್ದಾರೆ. ಇಬ್ಬರ ಸಭೆ ಒಮ್ಮತಕ್ಕೆ ಬಂದರೆ ಇಬ್ಬರ ಪರವಾಗಿ ಒಬ್ಬರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದು ಖಚಿತ ಎಂದು ತಿಳಿದು ಬಂದಿದೆ. ಇನ್ನರೆಡು ದಿನಗಳಲ್ಲಿ ಯಾರು ಅಭ್ಯರ್ಥಿ ಎಂಬುದು ಸ್ಪಷ್ಟವಾಗಲಿದೆ. ಒಟ್ಟಾರೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ ಕ್ಷೇತ್ರದಲ್ಲಿ ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.