ಗುಬ್ಬಿ: ತಾಲ್ಲೂಕಿನಲ್ಲಿ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಲಾಗುವುದು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು.
ಅನೇಕ ಶಾಲೆಗಳು ತಮ್ಮ ಗತವೈಭವವನ್ನು ಕಳೆದುಕೊಂಡು ಸೊರಗಿವೆ. ಅಂತಹ ಶಾಲೆಗಳನ್ನು ಗುರುತಿಸಿ ಮತ್ತೆ ಅವುಗಳ ಛಾಪು ಮರುಕಳಿಸುವಂತಾಗಬೇಕು. ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿ ಕಾರ್ಯಗತಕ್ಕೆ ತರಲಾಗುವುದು ಎಂದರು.
ಗುಬ್ಬಿ ವೀರಣ್ಣರ ಕಾಲದಲ್ಲಿ ಹೆಣ್ಣು ಮಕ್ಕಳಿಗಾಗಿ ತೆರೆದ ಈ ಶಾಲೆಯಲ್ಲಿ ಇಂದಿಗೂ 350 ಮಕ್ಕಳ ದಾಖಲಾತಿ ಇದೆ. ಈ ಶಾಲೆಯ ಜತೆಗೆ ಬಾಕಿ ಇರುವ 2 ಶಾಲೆಗಳನ್ನು ಶೀಘ್ರವಾಗಿ ದತ್ತು ಪಡೆದು ಅವಶ್ಯಕ ಕಾಮಗಾರಿಗಳಿಗೆ ಶೀಘ್ರ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎಚ್.ಜಗನ್ನಾಥ್, ಪಟ್ಟಣ ಪಂಚಾಯಿತಿ ಸದಸ್ಯ ಸಿ.ಮೋಹನ್, ಜಿ.ಆರ್.ಶಿವಕುಮಾರ್, ಶೌಕತ್ ಆಲಿ, ರೇಣುಕಾಪ್ರಸಾದ್, ಮುಖಂಡ ಪಣಗಾರ್ ವೆಂಕಟೇಶ್, ಬಿಇಒ ಸೋಮಶೇಖರ್, ಬಿಆರ್ಸಿ ಸಿದ್ದಲಿಂಗಸ್ವಾಮಿ, ಅಕ್ಷರ ದಾಸೋಹದ ಯೋಗಾನಂದ್, ಎಸ್ಡಿಎಂಸಿ ಅಧ್ಯಕ್ಷ ಜಿ.ಆರ್.ರಮೇಶ್, ಮುಖ್ಯಶಿಕ್ಷಕಿ ವಸಂತಕುಮಾರಿ, ಶಿಕ್ಷಕರಾದ ಭದ್ರೇಗೌಡ, ಜಯಣ್ಣ, ಜಿ.ದೇವಿಕಾ, ಬಿ.ಕಮಲಾ, ಎಚ್.ಡಿ.ಪುಷ್ಪಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.