ADVERTISEMENT

ತುಮಕೂರು: 38 ಗ್ರಾ.ಪಂ ಅಮೃತ ಯೋಜನೆಗೆ ಆಯ್ಕೆ

ಪ್ರತಿ ಗ್ರಾ.ಪಂ.ಗೆ ₹25 ಲಕ್ಷ ವಿಶೇಷ ಅನುದಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:53 IST
Last Updated 10 ಸೆಪ್ಟೆಂಬರ್ 2021, 5:53 IST

ತುಮಕೂರು: ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜಾರಿಗೆ ತಂದಿರುವ ‘ಅಮೃತ ಗ್ರಾಮ ಪಂಚಾಯಿತಿ’ ಯೋಜನೆಯಡಿ ಜಿಲ್ಲೆಯ ಆಯ್ದ 38 ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ತಾಲ್ಲೂಕುವಾರು ಗ್ರಾ.ಪಂ.ಗಳನ್ನು ಆಯ್ಕೆ ಮಾಡಲು ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಆಯ್ಕೆಯಾದ ಪ್ರತಿ ಗ್ರಾ.ಪಂ.ನಲ್ಲಿ ಯೋಜನೆ ಅನುಷ್ಠಾನಗೊಳಿಸಲು ₹25 ಲಕ್ಷ ಅನುದಾನ ನೀಡಲಾಗುತ್ತದೆ.

ಯೋಜನೆ ಅನುಷ್ಠಾನ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಮೂಲಭೂತ ಸೌಕರ್ಯ ಕಲ್ಪಿಸಲು ಚರ್ಚಿಸಲಾಯಿತು.

ADVERTISEMENT

ಅಮೃತ ಯೋಜನೆಯಡಿ ಜಿಲ್ಲೆಯಲ್ಲಿ 38 ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಗುರಿ ನಿಗದಿಪಡಿಸಿದ್ದು, ಪ್ರತಿ ತಾಲ್ಲೂಕಿಗೆ 4 ಗ್ರಾಮ ಪಂಚಾಯಿತಿ ಗುರುತಿಸಿ ಹೆಸರು ನೀಡುವಂತೆ ಶಾಸಕರಿಗೆ ತಿಳಿಸಿದರು. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಬಳಿಕ ಅಭಿವೃದ್ಧಿಗೊಳಿಸಲು ಕ್ರಮವಹಿಸಲಾಗುವುದು ಎಂದರು.

ಬೀದಿ ದೀಪ, ಸೋಲಾರ್ ಬೀದಿ ದೀಪ, ಪ್ರತಿ ಮನೆಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ, ಘನತ್ಯಾಜ್ಯ ವಿಂಗಡಣೆ, ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಗ್ರಾ.ಪಂ ಕಟ್ಟಡಗಳಲ್ಲಿ ಸೌರ ವಿದ್ಯುತ್ ಅಳವಡಿಕೆ, ಅಮೃತ ಉದ್ಯಾನವನ, ಗ್ರಾ.ಪಂ ಗ್ರಂಥಾಲಯ ಡಿಜಿಟಲೀಕರಣ, ಶಾಲೆಗಳು, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ ಕಲ್ಪಿಸುವುದು, ಶಾಲೆಗಳಲ್ಲಿ ಆಟದ ಮೈದಾನ, ಆವರಣ ಗೋಡೆ ನಿರ್ಮಿಸುವುದು, ಕೆರೆ, ಕಲ್ಯಾಣಿಗಳ ಪುನಶ್ಚೇತನ, ಇತರೆ ಮೂಲಭೂತ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ‘ಅಮೃತ ಗ್ರಾಮ ಯೋಜನೆ ಮಾರ್ಗಸೂಚಿಯಂತೆ ಜಲಜೀವನ್ ಮಿಷನ್ ಯೋಜನೆಯಡಿ ಮನೆಗೆ ನಲ್ಲಿ ಸಂಪರ್ಕ, ಸ್ವಚ್ಛ ಭಾರತ್ ಮಿಷನ್, 15ನೇ ಹಣಕಾಸು ಯೋಜನೆಯಡಿ ಬೀದಿ ಅಥವಾ ಸೋಲಾರ್ ದೀಪಗಳ ಅಳವಡಿಕೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯಾನವನ ನಿರ್ಮಾಣ ಅಭಿವೃದ್ಧಿ ಮಾಡಲಾಗುವುದು’ ಎಂದು ಹೇಳಿದರು.

ಇತರೆ ಮೂಲಗಳಿಂದ ದೊರೆಯಬಹುದಾದ ಆರ್ಥಿಕ ದೇಣಿಗೆ, ಭೌತಿಕ ಸಂಪನ್ಮೂಲ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ, ಸಿಎಸ್‍ಆರ್ ಅನುದಾನವನ್ನು ಒಗ್ಗೂಡಿಸುವ ಮೂಲಕ ಅನುಷ್ಠಾನ ಗೊಳಿಸಬಹುದಾಗಿದೆ ಎಂದರು.

ವಸತಿ ಯೋಜನೆ: ಅಮೃತ ಮಹೋತ್ಸವ ವಸತಿ ಯೋಜನೆಯಡಿ ವಸತಿ ರಹಿತರಿಗೆ ವಸತಿ ನಿರ್ಮಿಸಲು ಜಿಲ್ಲೆಯಲ್ಲಿ 43 ಗ್ರಾ.ಪಂ.ಗಳನ್ನು ಆಯ್ಕೆ ಮಾಡಬೇಕಾಗಿದ್ದು, ತಾಲ್ಲೂಕಿಗೆ ಕನಿಷ್ಠ 2 ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ವಸತಿ ಇಲ್ಲದವರಿಗೆ ವಸತಿ ನಿರ್ಮಿಸಲಾಗುವುದು ಎಂದರು.

ಸ್ವಚ್ಛ ಭಾರತ್ ಯೋಜನೆಯಡಿ ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕಾಗಿದೆ. ನಿವೇಶನ ಸಮಸ್ಯೆ ಇರುವ ಗ್ರಾ.ಪಂ.ಗಳಲ್ಲಿ ಬೇರೆ ನಿವೇಶನ ಗುರುತಿಸಿ ಅಥವಾ ಗ್ರಾಮಸ್ಥರನ್ನು ಮನವೊಲಿಸಿ ವಿಲೇವಾರಿ ಘಟಕ ನಿರ್ಮಿಸಲು ಆದ್ಯತೆ ಕೊಡುವಂತೆ ಸಚಿವರು ಶಾಸಕರಿಗೆ ಸಲಹೆ ಮಾಡಿದರು.

ಜಲಜೀವನ್ ಮಿಷನ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಶಾಸಕರು ಕೈಜೋಡಿಸಬೇಕು. ಕಾಮಗಾರಿಯನ್ನು ಶೀಘ್ರ ಮುಗಿಸುವ ಮೂಲಕ ಯೋಜನೆಯ ಯಶಸ್ವಿಗೆ ಸಹಕರಿಸಬೇಕು ಎಂದರು.

ಶಾಸಕರಾದ ಡಾ.ರಂಗನಾಥ್, ಮಸಾಲ ಜಯರಾಮ್, ಸಿ.ಎಂ.ರಾಜೇಶ್‍ಗೌಡ, ವೀರಭದ್ರಯ್ಯ, ಚಿದಾನಂದ್‌ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.