ಕುಣಿಗಲ್: ಪೌರಕಾರ್ಮಿಕರಿಗೆ ನಿವೇಶನಗಳನ್ನು ನೀಡುವುದರ ಜತೆಗೆ ಉತ್ತಮ ಕಾರ್ಮಿಕರಿಗೆ ₹10 ಸಾವಿರ ವಿಶೇಷ ಬಹುಮಾನವನ್ನು ಮುಂದಿನ ವರ್ಷದಿಂದ ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ನಾಗೇಂದ್ರ ಘೋಷಿಸಿದರು.
ಪುರಸಭೆಯಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರಿಗೆ ವೈಯಕ್ತಿಕವಾಗಿ ಉಡುಗೊರೆಗಳನ್ನು ನೀಡಿ ಮಾತನಾಡಿದರು.
ಪೌರಕಾರ್ಮಿಕರಿಗೆ ಸೌಲಭ್ಯಗಳು ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆಕೆಲಸಗಳಿಗೆ ಒತ್ತು ನೀಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ಕೋವಿಡ್ ಸಂಕಷ್ಟದ ದಿನಗಳಲ್ಲಿ ಪೌರಕಾರ್ಮಿಕರು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಸರ್ಕಾರವೂ ಪೌರಕಾರ್ಮಿಕರಿಗೆ ನೀಡುತ್ತಿದ್ದ ಭತ್ಯವನ್ನು ₹3,500ದಿಂದ ₹7,000ಕ್ಕೆ ಏರಿಸಿದ್ದು, ಆದೇಶ ಬುಧವಾರ ಬಂದಿದ್ದರೂ ಗುರುವಾರದ ಸಭೆಯಲ್ಲಿ 23 ಕಾರ್ಮಿಕರಿಗೆ ವಿಶೇಷ ಭತ್ಯವನ್ನು ವಿತರಿಸಲಾಗಿದೆ
ಎಂದರು.
ಸದಸ್ಯ ರಂಗಸ್ವಾಮಿ ಮಾತನಾಡಿ, ಪೌರಕಾರ್ಮಿಕರಿಗೆ ಸೌಲಭ್ಯ ಹೆಚ್ಚುತ್ತಿದ್ದರೂ ಕಾರ್ಯಕ್ಷಮತೆ ಕಡಿಮೆಯಾಗುತ್ತಿದೆ. ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಉಪಾಧ್ಯಕ್ಷೆ ಮಂಜುಳಾ ರಂಗಪ್ಪ, ಸ್ಥಾಯಿ ಸಮಿತಿ ಸದಸ್ಯ ಸೆಮ್ಮಿವುಲ್ಲಾ, ಸದಸ್ಯರಾದ ಅರುಣ್ ಕುಮಾರ್, ಕೋಟೆ ನಾಗಣ್ಣ, ಮಲ್ಲಿಪಾಳ್ಯ ಶ್ರೀನಿವಾಸ್ ಮಾತನಾಡಿದರು. ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ಸರಸಮ್ಮ, ಮುಖ್ಯಾಧಿಕಾರಿ ರವಿಕುಮಾರ್, ಪರಿಸರ ಎಂಜನಿಯರ್ ಚಂದ್ರಶೇಖರ್, ಆರೋಗ್ಯ ನಿರೀಕ್ಷಕಿ ಮಮತಾ, ಪುರಸಭೆ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.